ರಿಪ್ಪನ್ಪೇಟೆ ; ಹುಂಚ ಗ್ರಾ.ಪಂ. ವ್ಯಾಪ್ತಿಯ ಸಮಟಗಾರು ಶಾಲೆಯಲ್ಲಿ ಮಕ್ಕಳ ಸಂತೆ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಯಿತು. ಮಕ್ಕಳು ಅರಳು ಹುರಿದಂತೆ ಮಾತನಾಡುತ್ತ ವ್ಯವಹರಿಸುತ್ತಿದ್ದುದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್, ಪ್ರತಿ ಮಕ್ಕಳೊಂದಿಗೆ ಅಭಿಪ್ರಾಯ ಪಡೆದರಲ್ಲದೆ ಮಕ್ಕಳ ಮಾತುಗಾರಿಕೆ ಕುರಿತು ಪ್ರಶಂಸಿಸಿದರು. ಮಕ್ಕಳ ಸಂತೆ ಕಲಿಕೆಗಳ ಕಂತೆ. ಸಾಕಷ್ಟು ಕಲಿಕೆಯನ್ನು ಅನುಭವಾತ್ಮಕವಾಗಿ ಕಟ್ಟಿಕೊಡುವ ಇಂತಹ ಕಾರ್ಯಕ್ರಮಗಳು ಶಾಲಾ ಪಠ್ಯಕ್ಕೆ ಪೂರಕ ಎಂದರು.
ಡಿಡಿಪಿಐ (ಅಭಿವೃದ್ಧಿ) ಕೃಷ್ಣಮೂರ್ತಿ ಶಾಲಾ ಮಕ್ಕಳೊಂದಿಗೆ ಮಾತನಾಡಿ ಸಂತಸಪಟ್ಟರು. ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ನಾವೀನ್ಯತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಕೋಣಂದೂರಿನ ಅಧ್ಯಕ್ಷಕು, ಕಾರ್ಯದರ್ಶಿಗಳು, ಸದಸ್ಯರು ಭೇಟಿ ನೀಡಿ ಶಾಲೆಯ ಕಾಂಪೌಂಡ್ ಬರಹಕ್ಕೆ ಹಣ ನೀಡಿ ಶಾಲೆಯ ನಾವೀನ್ಯತೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ಶಾಲಾ ವಾತಾವರಣ ಮಕ್ಕಳ ವ್ಯವಹಾರ ಕೌಶಲ ಕಂಡು ಹರ್ಷಿಸಿದರು. ಹತ್ತಾರು ಗ್ರಾಮಗಳಿಂದ ಬಂದ ಜನರು ಸಾಕಷ್ಟು ವ್ಯಾಪಾರ ಮಾಡಿ ಮಕ್ಕಳ ವ್ಯವಹಾರ ಜ್ಞಾನ ಹಾಗೂ ಕುಶಲತೆಯನ್ನ ಪ್ರಶಂಸಿಸಿದರು.
ಪರಸ್ಪರ ಸ್ವರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು ಎಂಬ ಛಲದಿಂದ ಪೋಷಕರನ್ನು ಕರೆದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ಸುತ್ತಮುತ್ತಲ ಪ್ರಾಥಮಿಕ ಶಾಲೆಗಳಿಂದ ಹಾಗೂ ಅಮೃತ ಮತ್ತು ಪದ್ಮಾಂಬ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಕರು ಭೇಟಿ ನೀಡಿ ಸಂತೆಯಲ್ಲಿ ಪಾಲ್ಗೊಂಡು ಸಂತಸಪಟ್ಟರು.

ಹಳ್ಳಿಯ ವಾತಾವರಣ ಸೃಷ್ಟಿಸಿ ಅಂಗಡಿ ಕಟ್ಟುಗಳನ್ನು ರೂಪಿಸಿ ಮಳಿಗೆಗಳನ್ನು ತೆರೆದು ಅದ್ಭುತವಾಗಿ ಸಂತೆಯನ್ನು ಆಯೋಜಿಸಿದ ಪೋಷಕರ ಶ್ರಮ ಶಿಕ್ಷಕರ ಕರ್ತವ್ಯ ಪರತೆ ಕುರಿತು ನೆರೆದವರೆಲ್ಲ ಮೆಚ್ಚುಗೆ ಸೂಚಿಸಿದರು.
ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಸುಮಂಗಲ ದೇವರಾಜ, ನಿಕಟಪೂರ್ವ ಸದಸ್ಯೆ ಯಶಸ್ವತಿ ಜೈನ್, ಎಸ್ಡಿಎಂಸಿ ಅಧ್ಯಕ್ಷ ಮೋಹನ್ ಎಂ ಎಸ್, ಉಪಾಧ್ಯಕ್ಷೆ ಭಾರತಿ, ಮುಖ್ಯ ಶಿಕ್ಷಕಿ ರತ್ನಕುಮಾರಿ ಎಸ್, ಶಿಕ್ಷಕ ವೃಂದ, ಶ್ರೀಧರ್ ಮೂರ್ತಿ ಕೆ ಎಸ್, ಶಿಕ್ಷಣಾಸಕ್ತರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





