ರಿಪ್ಪನ್ಪೇಟೆ ; ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಬೆಳ್ಳೂರು ಗ್ರಾಮದಲ್ಲಿ ತೆಂಗಿನಮರವೊಂದು ರತ್ನಮ್ಮ ಎಂಬುವರ ವಾಸದ ಮನೆ ಮೇಲೆ ಬಿದ್ದು ಮನೆ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿತ್ತು. ಅದೃಷ್ಟವಶಾತ್ ಮನೆಯಲ್ಲಿದ್ದ ಐವರು ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿತ್ತು.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಹೊಸನಗರ ತಹಸೀಲ್ದಾರ್ ಭರತ್ ರಾಜ್ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣರ ಸೂಚನೆ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರ ಬಿದ್ದ ನಂತರವೂ ಮಳೆ ಮುಂದುವರಿದ ಪರಿಣಾಮ ದವಸ ಧಾನ್ಯಗಳು ನೀರುಪಾಲಾಗಿದ್ದು ಮನೆಯ ಕೆಲವು ಭಾಗಗಳು ಭಾಗಶಃ ಹಾನಿಗೊಳಗಾಗಿರುವುದರಿಂದ ಕುಟುಂಬಸ್ಥರು ಆತಂಕದಲ್ಲಿ ಕಾಲಕಳೆಯುವಂತಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ತಹಸೀಲ್ದಾರ್ ಭರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ದೊರಕಿಸುವ ಭರವಸೆ ನೀಡಿದರು. ಇದೇ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರು ರತ್ನಮ್ಮ ಅವರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಅಪ್ರೋಜ್ ಅಹಮದ್ , ಗ್ರಾಮ ಲೆಕ್ಕಿಗ ಜಾಕೀರ್ , ಪ್ರಮುಖರಾದ ಯೋಗೇಶ್ ಬೆಳ್ಳೂರು ಹಾಗೂ ಇನ್ನಿತರರು ಇದ್ದರು.

