ಹೊಸನಗರ ; ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳ ತೃತೀಯ ಭಾಷೆ (ಹಿಂದಿ) ಎಸ್ಎಸ್ಎಲ್ಸಿ ಪರೀಕ್ಷೆ ಮಾ.31ರ ಮಂಗಳವಾರ ನಡೆದಿದ್ದು ನಮಗೆ ಸರ್ಕಾರ ಸೂಚಿಸಿರುವ ಗ್ರೇಡಿಂಗ್ ಅಂಕದ ಬದಲಾಗಿ ಪರೀಕ್ಷೆ ಬರೆದ ಅಂಕವನ್ನೇ ನೀಡಬೇಕೆಂದು ಹೊಸನಗರದ ಸರ್ಕಾರಿ ಜೂನಿಯರ್ ಕಾಲೇಜ್ ವಿಭಾಗದ ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಸನಗರ ತಹಸೀಲ್ದಾರ್ ಭರತ್ರಾಜ್ರಿಗೆ ಮನವಿ ಪತ್ರ ಸಲ್ಲಿಸಿ ಮನವಿಪತ್ರವನ್ನು ಸರ್ಕಾರಕ್ಕೆ ಕಳುಹಿಸಬೇಕೆಂದು ಕೇಳಿಕೊಂಡರು.

ಮನವಿ ಪತ್ರದಲ್ಲಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ತೃತೀಯ ಭಾಷೆಯ (ಹಿಂದಿ) ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸದಂತೆ ಸರ್ಕಾರ ತೆಗೆದುಕೊಂಡಿರುವ ಏಕಪಕ್ಷೀಯ ತೀರ್ಮಾನ ಪ್ರಸ್ತುತ ವಿದ್ಯಾರ್ಥಿಗಳ ಸಮಗ್ರ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೃತೀಯ ಭಾಷೆಯ ವಿದ್ಯಾರ್ಥಿಗಳ ಭಾಷಾ ಸಾಮಥ್ಯವನ್ನು ವೃದ್ಧಿಸುವುದಲ್ಲದೇ ವಿವಿಧ ಸಂಸ್ಕೃತಿಗಳ ಅರಿವು ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ನಾವು ಕಲಿಯುವ ಮೂರು ಭಾಷೆಗಳಿಗೂ ಸರಿ ಸಮನಾದ ಮಾನ್ಯತೆ ನೀಡುವುದು ಶೈಕ್ಷಣಿಕವಾಗಿ ನ್ಯಾಯ ಸಮ್ಮತವಾಗಿದೆ. ನಾವು ತರಗತಿಯಲ್ಲಿ ಓದಿ ಕಲಿತ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡುವುದು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ಗ್ರೇಡಿಂಗ್ ನೀಡುವುದರಿಂದ ನಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯ ಗ್ರೇಡಿಂಗ್ ರದ್ದುಪಡಿಸಿ ನಮಗೆ ನಾವು ಪರೀಕ್ಷೆಯಲ್ಲಿ ಬರೆದ ಅಂಕವನ್ನು ನೀಡಬೇಕೆಂದು ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





