ಹೊಸನಗರ ; ತಾಲೂಕಿನಿಂದ ಶಿವಮೊಗ್ಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಬೈಸಗುಂದ ಸರ್ಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಂಜಪ್ಪ, ತಳಲೆ ಶಾಲೆಯ ಸಹ ಶಿಕ್ಷಕಿ ಜೆ.ಶಿಲ್ಪಾ, ಮಲೆನಾಡು ಪ್ರೌಢ ಶಾಲೆಯ ಸಹ ಶಿಕ್ಷಕ ಚಂದ್ರು, ವಿಶೇಷ ಪ್ರಶಸ್ತಿಗೆ ಭಾಜನರಾದ ಮಾರುತಿಪುರ ಶಾಲೆಯ ಮುಖ್ಯ ಶಿಕ್ಷಕಿ ಎ.ಭಾರತಿ ಹಾಗೂ ಅಮೃತ ಕೆಪಿಎಸ್ ಶಾಲೆಯ ಸಹ ಶಿಕ್ಷಕ ಕೆ.ಕೆ.ಪುಟ್ಟಸ್ವಾಮಿ ಅವರನ್ನು ಹೊಸನಗರ ಈಡಿಗ ಸಭಾಭವನದಲ್ಲಿ ನಡೆದ ಮಾಜಿ ರಾಷ್ಟ್ರಪತಿ, ಶಿಕ್ಷಕ ತಜ್ಞ, ಭಾರತರತ್ನ ಡಾ. ಎಸ್. ರಾಧಾಕೃಷ್ಣ ಅವರ 153ನೇ ಜಯಂತಿ ಪ್ರಯುಕ್ತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದು ಶ್ರೇಷ್ಟ ಸಂಸ್ಕೃತಿ
ರಿಪ್ಪನ್ಪೇಟೆ ; ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದು ಶ್ರೇಷ್ಟ ಪರಂಪರೆಯಾಗಿದೆ. ವ್ಯಕ್ತಿ ಸಮಾಜದಲ್ಲಿ ಸಭ್ಯತೆ ಹೊಂದಿದ ಆದರ್ಶಮಯ ಪ್ರಜೆಯಾಗಿ ರೂಪುಗೊಳ್ಳಲು ಶಿಕ್ಷಕರ ಪಾತ್ರ ಶ್ಲಾಘನೀಯವೆಂದು ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಸದಾಶಿವ ಕೆ.ಆರ್.ಹೇಳಿದರು.

ಮಳಲಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ರೋಟರಿ ಕ್ಲಬ್ ವತಿಯಿಂದ ಅಂಗನವಾಡಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ನ ಧ್ಯೇಯ ವಾಕ್ಯವೇ ಸೇವೆ. ಶಿಕ್ಷಣ, ಆರೋಗ್ಯ ಹೀಗೆ ಹತ್ತು ಹಲವು ರೂಪಗಳಲ್ಲಿ ಸೇವೆ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಯನ್ನು ವಿತರಿಸಲಾಗುತ್ತಿದೆ ಎಂದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತರಾದ ಶಿಕ್ಷಕ ಕೆ. ಲಕ್ಷ್ಮಣ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೋಣಂದೂರು ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಟಿ.ಈಶ್ವರಪ್ಪ, ಟಿ.ವಿ.ವೀರಪ್ಪ, ಹೆಚ್.ವಿ.ರಾಜು ಹುಗುಡಿ, ವೀರಭದ್ರಪ್ಪ, ಹೆಚ್.ಕೆ. ನಯನಕುಮಾರ, ಹೆಚ್.ವಿ.ಜಯಕುಮಾರ್, ಜೆ.ಪಿ.ಕಿರಣ್, ಶಿಕ್ಷಕ ಹೆಚ್.ಎಂ.ಸುರೇಶ, ಹೆಚ್.ಎಂ.ವೀರಭದ್ರಪ್ಪ, ವೀರಣ್ಣ ತಳಗಿಬೈಲು, ಹೆಚ್.ಕೆ.ರವಿ ಇದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನಿ, ನೋಟ್ ಬುಕ್ ಸಾಮಗ್ರಿಗಳು, ವಾಟರ್ ಬಾಟಲ್ಗಳನ್ನು ವಿತರಿಸಲಾಯಿತು.
ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಜೆ.ಪಿ.ಕಿರಣ ಮಾತನಾಡಿದರು. ಈಶ್ವರಪ್ಪ ಬಿ.ಟಿ.ವಂದಿಸಿದರು.

