ಹೊಸನಗರ ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಗೆ ಕಾರೊಂದು ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಹೊಸನಗರದ ನಗರ ಸಮೀಪದ ಮಡೋಡಿ ಎಂಬಲ್ಲಿ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಹರಿಭಟ್ವ (76) ಮೃತಪಟ್ಟಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಮೃತರ ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಎಂಬುವವರ ಜೊತೆಗೆ ಕಾರಿನಲ್ಲಿ ಹೊಸನಗರದ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತವಾಗಿದೆ.
ಲೇಖನವನ್ನು ಮುಂದುವರಿಸಿ ಓದಿ

ನಿಟ್ಟೂರು-ನಾಗೋಡಿ ಸಮೀಪದ ಮಡೋಡಿ ಗ್ರಾಮದ ಬಳಿ ಹರಿಭಟ್ ಅವರು ಚಲಾಯಿಸುತ್ತಿದ್ದ ಕಾರು ಖಾಸಗಿ ಬಸ್ನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿನತ್ತ ಸಾಗಿ ಹಲವು ಬಾರಿ ಪಲ್ಟಿಯಾಗಿದೆ. ಈ ಸಂದರ್ಭ ಹರಿಭಟ್ ಅವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

