ರಿಪ್ಪನ್ಪೇಟೆ ; ಕಳೆದ ಒಂದು ವಾರದಿಂದ ಮಲೆನಾಡಿನ ಅರಸಾಳು, ಬೆಳ್ಳೂರು, ಕೆಂಚನಾಲ, ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಆನೆಗಳ ಹಿಂಡು ದಾಳಿ ನಡೆಸುವ ಮೂಲಕ ಬೆಳೆ ಧ್ವಂಸಗೊಳಿಸುತ್ತಿದ್ದು ಶಾಲಾ, ಕಾಲೇಜ್ ಸಾರ್ವಜನಿಕರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸಾಕಷ್ಟು ಭಾರಿ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಇಂದು ಅರಸಾಳು ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂದೆ ಶಾಸಕ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಇವರ ನೇತೃತ್ವದಲ್ಲಿ ಸಾವಿರಾರು ರೈತರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏನು ಮಾಡುತ್ತಿದ್ದಾನೆ ಅವನಿಗೆ ರೈತರ ಕಷ್ಟ ಏನು ಎಂಬುದು ಗೊತ್ತಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಶಾಸಕರ ತೃಪ್ತಿ ಪಡಿಸಿಕೊಂಡು ಖುಷಿ ಪಡುವ ಕಾರ್ಯದಲ್ಲಿ ತೊಡಗಿಕೊಂಡಂತೆ ವರ್ತಿಸುತ್ತಿದ್ದಾರೆ.ನಾವು ಯಾರಿಗೂ ಹೆದರಿಕೊಂಡು ಇವರುವಂತಹ ವ್ಯಕ್ತಿಗಳೆಲ್ಲಾ ನಮ್ಮದು ಹೋರಾಟದ ಮೂಲಕ ಜಡ್ಡು ಗಟ್ಟಿದ ಅಧಿಕಾರಿಗಳನ್ನು ಎಚ್ಚರಿಸು ಕೆಸಲದೊಂದಿಗೆ ಸತ್ತು ಹೋಗಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆಂದು ಹೇಳಿ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಈಗ ಅಧಿಕಾರಿಗಳದೇ ಸರ್ಕಾರವಾಗಿದೆ ಎಂದು ಖಾರವಾಗಿ ಮಾತನಾಡಿದ ಅವರು, ಆನೆಗಳು ಕಾಡಿನಿಂದ ಹೊರಗೆ ಬರದಂತೆ ಇ.ಪಿ.ಟಿ. ನಿರ್ಮಿಸುವ ಯೋಜನೆ ಜಾರಿಯಲ್ಲಿದ್ದರೂ ಅದನ್ನು ಇಲಾಖೆಯವರು ಆನೆ ಓಡಾಡದಂತೆ ಕಂದಕವನ್ನು ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ರೈತರನ್ನು ಒಕ್ಕಲೆಬ್ಬಿಸುವುದಾಗಿ ಬೇಜವಾಬ್ದಾರಿ ಹೇಳಿಕೆಯನ್ನು ನೀಡುವ ಮೂಲಕ ರೈತರ ತಾಳ್ಮೆಯನ್ನು ಕೆದಕಲು ಹೊರಟಿದ್ದಾರೆಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಆರೋಪಿಸಿ ಇಂತಹ ಗೊಡ್ಡು ಬೆದರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಳೆದ ವರ್ಷ ಅರಸಾಳು ವಲಯ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಓರ್ವ ರೈತ ಆನೆ ದಾಳಿಯಿಂದ ಸಾವನ್ನಪ್ಪಿರುವ ಸಂದರ್ಭದಲ್ಲಿ ಅಮಾಯಕ ವ್ಯಕ್ತಿಯ ಮೇಲೆ ಇಲಾಖೆಯವರು ಅನಗತ್ಯವಾಗಿ ಕೇಸ್ ದಾಖಲಿಸಿದ್ದು ಆ ಕೇಸ್ ವಾಪಾಸ್ ತೆಗೆಯುವಂತೆ ಸಹ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿ, ವಾಪಾಸ್ ತೆಗೆಯದಿದ್ದರೆ ಮುಂದಿನ ದಿನಗಳಲ್ಲಿ ಸಿಸಿಎಫ್ ಕಛೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಡು ಇರುವಷ್ಟೆ ಇದೆ. ಆನೆಗಳ ಸಂತಾನ ಹೆಚ್ಚಾಗಿದೆ. ತಾತ್ಕಾಲಿಕವಾಗಿ ಆನೆಗಳನ್ನು ಓಡಿಸುವ ಕೆಲಸ ಮಾಡಿ ರೈತರ ಬೆಳೆ ಸಂರಕ್ಷಣೆ ಮಾಡಿ ಇನ್ನೂ ಒಂದು ವಾರದೊಳಗೆ ಆನೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವುದರೊಂದಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೂಡಾ ನಮ್ಮ ಅಧಿಕಾರಿವರ್ಗ ಇನ್ನೂ ಬ್ರಿಟಿಷರು ತಂದ ಕಾನೂನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದ್ದಾರೆಂದು ಉದಾಹರಣೆಯೊಂದಿಗೆ ವಿವರಿಸಿ, 1929 ರಲ್ಲಿ ಡಿನೋಟಿಫಿಕೇಷನ್ ಆಗಿದೆ ಎಂದು ನಮ್ಮ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ನಮಗೆ ಮಾಹಿತಿ ನೀಡುತ್ತಾ ಈ ಜಾಗ ಅರಣ್ಯ ಇಲಾಖೆಗೆ ಸೇರಿದು ಎಂದು ಸಮಜಾಯಿಸಿ ನೀಡುತ್ತಾರೆಂದು ಕೆಂಡ ಕಾರಿದರು.

ಕಸ್ತೂರಿ ರಂಗನ್ ವರದಿ ;
ಈ ಬಗ್ಗೆ ಕೇಂದ್ರದ ಅರಣ್ಯ ಸಚಿವರಿಗೆ ಐಎಫ್ಎಸ್ ಅಧಿಕಾರಿಗಳು ತಪ್ಪು ಮಾಹಿತಿ ಈ ವರದಿ ಅನುಷ್ಟಾನ ಮಾಡಿದರೆ ಕಾಡು ಉಳಿಯುವುದೆಂದು ಹೇಳಿಕೆ ಕೊಡಿಸಲು ಮುಂದಾಗಿದ್ದು ಆಗ ನಾನು ಹರತಾಳು ಹಾಲಪ್ಪ ಅರಣ್ಯ ಸಚಿವರಲ್ಲಿ ಮನವಿ ಮೂಲಕ ಕರ್ನಾಟಕದಲ್ಲಿ ಉಳುವವನೇ ಹೊಲದೊಡೆಯ ತತ್ವದಡಿ ಭೂಮಿ ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ. ಇದನ್ನು ನೀವು ಅಧಿಕಾರಿಗಳ ಮಾತಿನಂತೆ ಅನುಷ್ಟಾನ ಮಾಡಲು ಮುಂದಾದರೆ ರೈತರ ರಕ್ತಕ್ರಾಂತಿ ನೋಡಬೇಕಾಗುತ್ತದೆಂದು ಹೇಳಿ ತಡೆ ಹಿಡಿದಿರುವುದಾಗಿ ಸಭೆಯಲ್ಲಿ ವಿವರಿಸಿದರು.
ಅಡಿಕೆ ಶುಂಠಿಗೆ ಹೆಚ್ಚು ಬೆಂಬಲ ಬೆಲೆ ಬರಲು ಕಾರಣ ;
ಅಡಿಕೆ ಸೇವನೆಯಿಂದ ಮಾರಕ ರೋಗ ಹರಡುವುದೆಂಬ ತಪ್ಪು ಮಾಹಿತಿಯಿಂದಾಗಿ ರೈತರು ಕಂಗಾಲಾಗಿದ್ದರು ಆದರೆ ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪರ ಹೋರಾಟದ ಫಲದಿಂದಾಗಿ ಅಡಿಕೆ ಹಾನಿಕಾರಕವಲ್ಲ ಎಂಬ ಸಂಶೋಧನಾ ವರದಿಯಿಂದಾಗಿ ಇಂದು ಅಡಿಕೆಗೆ ಹೆಚ್ಚು ಬೆಲೆಯಾಗಿ ರೈತರು ಅರ್ಥಿಕವಾಗಿ ಸುಧಾರಣೆ ಹೊಂದಲು ಸಾಧ್ಯವಾಗಿದ್ದರೆ ಈಗ ಶುಂಠಿ ಸಹ ಅದೇ ರೀತಿಯಲ್ಲಿ ಬೆಲೆ ಹೆಚ್ಚಳ ಕಂಡು ರೈತರು ಆರ್ಥಿಕವಾಗಿ ಬೆಳೆವಣಿಗೆ ಹೊಂದಲು ಸಾಧ್ಯವಾಗಿರುವಾಗಲೇ ಅಡಿಕೆಗೆ ಮತ್ತು ಶುಂಠಿಗೆ ಮಾರಕ ರೋಗದಿಂದಾಗಿ ಇಳುವರಿ ಕುಂಠಿತಗೊಂಡು ಸಂಕಷ್ಟಕೆ ಎಡೆ ಮಾಡಿದಂತಾಗಿದೆ ಎಂದರು.
ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎನ್.ಸತೀಶ್, ರೈತ ಮುಖಂಡ ಶಿವಾನಂದ, ದಿನೇಶ್ ಸರಸ್ವತಿ, ಬೆಳ್ಳೂರು ತಿಮ್ಮಪ್ಪ, ನಾಗಾರ್ಜುನಸ್ವಾಮಿ, ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ವನ್ಯ ಜೀವಿ ವಿಭಾಗದ ಡಿ.ಎಫ್.ಓ, ಅರಣ್ಯ ಇಲಾಖೆಯ ಡಿ.ಎಫ್.ಓ ಹಾಗೂ ಎಸಿಎಫ್ ಹಾಗೂ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಹಾಜರಿದ್ದರು.

