ರಿಪ್ಪನ್ಪೇಟೆ ; ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒತ್ತುವರಿ ಹೆಸರಿನಲ್ಲಿ ಕಂದಾಯ, ಅರಣ್ಯ ಭೂಮಿ ಕಬಳಿಸಿ ಲಕ್ಷಾಂತರ ರೂಪಾಯಿಗಳಿಗೆ ಬಾಂಡ್ ಪೇಪರ ಮೂಲಕ ಕರಾರು ಪತ್ರ ಮಾಡಿ ಮಾರಾಟ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದ್ದರೂ ಕೂಡಾ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ತಮ್ಮ ಜೇಬು ಭರ್ತಿ ಮಾಡಿಕೊಂಡು ಗಪ್ ಚುಪ್ ಆಗಿದ್ದಾರೆ.
ಹೌದು, ಬಗರ್ಹುಕುಂ ನೆಪದಲ್ಲಿ ಅರಣ್ಯದಲ್ಲಿ ಸಾಕಷ್ಟು ಬೆಲೆ ಬಾಳುವ ಮರಗಳ ಅಕ್ರಮ ಕಡಿತಲೆ ಮಾಡಿ ಕೆಲವರು ಮಣ್ಣಿನಡಿ ಮುಚ್ಚಿಡಲಾಗಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳ ಜೇಬು ತುಂಬಿ ಇತ್ತ ತಲೆ ಹಾಕಿಯೂ ಸಹ ನೋಡದಂತೆ ಮಂಕುಬೂದಿ ಎರಚಿ ಅಕ್ರಮ ಭೂಮಿ ಒತ್ತುವರಿ ಮಾಡಿ ಸ್ವಾಹ ಮಾಡಿಕೊಳ್ಳುತ್ತಿದ್ದರು ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲದವರಂತೆ ಇರುವುದರ ಹಿಂದಿನ ಮರ್ಮ ಏನು? ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಕೆಲವು ರೈತರು ತಮ್ಮ ಖಾತೆ ಜಮೀನಿನಲ್ಲಿ ಅಡಿಕೆ, ಬಾಳೆ ಹಾಕುವ ಉದ್ದೇಶದಿಂದ ಜಮೀನಿನಲ್ಲಿನ ಬೆಲೆ ಬಾಳುವ ಮರಗಳನ್ನು ಇಲಾಖೆಯವರ ಅನುಮತಿ ಇಲ್ಲದೆ ಅಕ್ರಮವಾಗಿ ಕಡಿತಲೆ ಮಾಡುತ್ತಿದ್ದರೂ ಅರಣ್ಯ ರಕ್ಷಕರು ಮಾತ್ರ ಕಣ್ಮುಚ್ಚಿ ಕೊಂಡಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಯಾರಾದರೂ ಬಡವರು ಅಲ್ಪ-ಸ್ವಲ್ಪ ಜಾಗ ಮಾಡಿಕೊಂಡು ಬೇಲಿ ಹಾಕಿದರೆ ಸಾಕು ಅರಣ್ಯ ರಕ್ಷಕರು, ವೀಕ್ಷಕರು ಹಾಜರ್ ಆಗಿ ತೆರವುಗೊಳಿಸುವಂತೆ ದುಬಾಲು ಬೀಳುವುದರೊಂದಿಗೆ ಹಣ ಪೀಕುವಂತೆ ಒತ್ತಡ ಹಾಕಿ ಕುಳಿತು ಬಿಡುತ್ತಾರೆ. ಹಣ ಕೊಟ್ಟರೆ ನಮಗೂ ಈ ಜಾಗಕ್ಕೂ ಸಂಬಂಧವಿಲ್ಲ ಕಂದಾಯ ಜಮೀನು ಎಂದು ಹೇಳಿ ಅಲ್ಲಿಂದ ಕಾಲ್ಕೀಳುತ್ತಾರೆ.
ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ವ್ಯಾಪ್ತಿಯ ಕೊಳವಳ್ಳಿ, ಬಿದರಹಳ್ಳಿ, ವಡಾಹೊಸಳ್ಳಿ, ಹಾಲಂದೂರು, ಕೋಟೆತಾರಿಗ, ಬೆಳಕೋಡು ಹಾಗೂ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಕ್ಕಳಲೇ, ನೇರಲುಮನೆ, ಬಾಳೂರು, ಗವಟೂರು ಮತ್ತು ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿ ದೊಂಬೆಕೊಪ್ಪ ಗ್ರಾಮದ ಸುತ್ತಮುತ್ತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಮೀಸಲಿರಿಸಲಾಗಿದ್ದ ಜಾಗದಲ್ಲಿನ ಬೃಹತ್ ಗಾತ್ರದ ಬೆಲೆ ಬಾಳುವ ಮರಗಳ ಮಾರಣ ಹೋಮದೊಂದಿಗೆ ಜಾಗ ಬರಿದಾಗುತ್ತಿದ್ದರೂ ಅಧಿಕಾರಿ ವರ್ಗ ಮಾತ್ರ ತಮಗೇನು ಗೊತ್ತಿಲ್ಲವೆಂಬಂತೆ ಜಾಣಕುರುಡಾಗಿರುವುದರ ಹಿಂದೆ ಲಂಚದ ಹಣ ಕೆಲಸ ಮಾಡಿದಂತಾಗಿದೆ.
ಇದರ ಮಧ್ಯೆ ಹಲವರು ಸರ್ಕಾರಿ ಜಾಗವನ್ನು ಸಹ ಖಾತೆ ಜಮೀನಿನ ಜೊತೆ ಸೇರಿಸಿ ಭೂ ಪರಿವರ್ತನೆ ಮಾಡುವ ಹುನ್ನಾರ ಸಹ ನಡೆಯುತ್ತಿದ್ದು ಅಧಿಕಾರಿಗಳು ಮಾತ್ರ ಐಶಾರಾಮಿ ಜೀವನ ಮಾಡುವುದರಲ್ಲಿ ಯಾವ ಜಾಗವಾದರೇನು ನಮಗೆ ಸೇರಬೇಕಾದ ಹಣ ಬಂದರೆ ಸಾಕು ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ.
ಇನ್ನಾದರೂ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಭೂ ಒತ್ತುವರಿ ದಾರರಿಗೆ ಕ್ರಮ ಕೈಗೊಳ್ಳಲು ಮುಂದಾಗುವರೆ ಕಾದು ನೋಡಬೇಕಾಗಿದೆ.
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು
HosanagaraJune 1, 2025ಹೊಸನಗರ ; ಜೂ. 2 ಮತ್ತು 3ಕ್ಕೆ ತಾಲೂಕಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಕಾರ್ಯಕ್ರಮ
Adike RateJune 1, 2025Arecanut, Black Pepper Price 31 May 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?