Ripponpete

ಗಣೇಶೋತ್ಸವ – ಈದ್‌ಮಿಲಾದ್ ; ಡಿಜೆ ನಿಷೇಧ, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ

ರಿಪ್ಪನ್‌ಪೇಟೆ ; ಗಣೇಶೋತ್ಸವ ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ.ಕಾರ್ಯಪ್ಪ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ಪೊಲೀಸ್ ಇಲಾಖೆಯವರು ಶಿವಮಂದಿರದಲ್ಲಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳು ಶಾಂತಿ ಪೂರ್ಣವಾಗಿ ನಡೆಸಲು ಪೊಲೀಸ್ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಸಹಕಾರ ನೀಡಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಗಣಪತಿ ಪೆಂಡಾಲ್ ಬಳಿ ಸಿಸಿ ಕ್ಯಾಮೆರಾ ಅಳವಡಿಸುವುದು ಮತ್ತು ಮೆರವಣಿಗೆಯಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ಕಾರ್ಯನಿರ್ವಹಿಸಿದರೆ ಗೊಂದಲಗಳು ಸೃಷ್ಠಿಯಾಗುವುದಿಲ್ಲ ಎಂದರು.

ಹೊಸನಗರ ತಾಲ್ಲೂಕು ತಹಸೀಲ್ದಾರ್ ರಶ್ಮಿ ಹಾಲೇಶ್ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಪ್ರಚೋದನಕಾರಿ ಸಂದೇಶಗಳಿಗೆ ಅವಕಾಶವಿಲ್ಲ. ಬಣ್ಣದ ಪೇಪರ್, ಬೈಕ್ ರ‍್ಯಾಲಿ ಹಾಗೂ ಡಿಜೆ ಅಳವಡಿಕೆಗೆ ಅವಕಾಶವಿಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಂಘ ಸಂಸ್ಥೆಯ ಸದಸ್ಯರು ಸರ್ಕಾರದ ಮಾನದಂಡಗಳನ್ನು ಪರಿಪಾಲನೆ ಮಾಡುವ ಮೂಲಕ ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಲು ಸಲಹೆ ನೀಡಿದರು.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಹೊಸನಗರ ಸಿಪಿಐ ಗುರಣ ಹೆಬ್ಬಾಳ್, ತೀರ್ಥಹಳ್ಳಿ ವೃತ್ತ ನಿರೀಕ್ಷಕ ಇಮ್ರಾನ್‌ಬೇಗಂ, ಅಬಕಾರಿ ಇನ್ಸ್‌ಪೆಕ್ಟರ್ ಕೆ.ಎಂ.ನಾಗರಾಜ್, ಅಗ್ನಿಶಾಮಕ ದಳದ ಗೋಪಾಲ, ಮೆಸ್ಕಾಂ ಇಲಾಖೆ ಸಹಾಯಕ ಅಭಿಯಂತರ ಕೃಷ್ಣ, ಅರಸಾಳು ವಲಯ ಅರಣ್ಯಾಧಿಕಾರಿ ಶರಣಯ್ಯ, ಉಪಸ್ಥಿತರಿದ್ದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿಂದೂ ರಾಷ್ಟ್ರಸೇನಾ ಗಣೋಶೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಪಿ.ಸುದೀರ್, ಜುಮ್ಮಾ ಮಸೀದಿಯ ಮುಖಂಡ ಆರ್.ಎ.ಚಾಬುಸಾಬ್, ಎಂ.ಸುರೇಶ್‌ಸಿಂಗ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹುಂಚ ಗ್ರಾಪಂ ಸದಸ್ಯೆ ಯಶಸ್ವತಿ ವೃಷಭನಾಥ್ ಜೈನ್, ಜನಪರ ಹೋರಾಟಗಾರ ವೇದಿಕೆ ಅಧ್ಯಕ್ಷ ಆರ್.ಎನ್. ಮಂಜುನಾಥ, ಸುಂದರೇಶ್ ಕೆರೆಹಳ್ಳಿ, ಸಾರ್ವಜನಿಕರ ಪರವಾಗಿ ಮಾತನಾಡಿದರು.

ತೀರ್ಥಹಳ್ಳಿ ಡಿ.ವೈ.ಎಸ್.ಪಿ.ಅರವಿಂದ ಕಲಗುಜಿ, ಸ್ವಾಗತಿಸಿದರು. ಗುರಣ್ಣ ಹೆಬ್ಬಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸ್‌ಐ ರಾಜುರೆಡ್ಡಿ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>