ಹೊಸನಗರ ; ತಾಲೂಕಿನ ಮಾಸ್ತಿಕಟ್ಟೆ ವಲಯದ ಹುಲಿಕಲ್ ಗ್ರಾಮದ ವಾಸು ಪೂಜಾರಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದ್ದು ಅದನ್ನು ಹಸ್ತಾಂತರಿಸಲಾಯಿತು.
ವಾಸು ಪೂಜಾರಿ ಅವರ ಆಶ್ರಯಕ್ಕೆ ಯಾರು ಇಲ್ಲದಿದ್ದು ತೀರಾ ಬಡತನದಿಂದ ಬೇರೆಯವರ ಕೊಟ್ಟಿಗೆಯಲ್ಲಿ ದಿನ ಕಳೆಯುತ್ತಿದ್ದು ವಾಸು ಪೂಜಾರಿ ಅವರ ಈ ಸ್ಥಿತಿಯನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ತಿಂಗಳಿಗೆ 1000 ರೂಲ ನಂತೆ ಮಾಸಾಸನವನ್ನು ನೀಡಿ ಇದೀಗ ಅವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಈ ಮನೆಯ ಹಸ್ತಾಂತರವನ್ನು ಹೊಸನಗರ ತಾಲೂಕಿನ ತಹಸೀಲ್ದಾರ್ ರಶ್ಮಿ ಹಾಲೇಶ್ ವಾಸು ಪೂಜಾರಿಯವರಿಗೆ ಹಸ್ತಾಂತರ ಮಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು ಈಯೋಜನೆಯಿಂದ ಸದಸ್ಯರಿಗೆ ಉಳಿತಾಯ ಮಾಡುವಂತಹ ಮನೋಭಾವನೆ ಮೂಡಿರುತ್ತದೆ ಮತ್ತು ಪಡೆದ ಸಾಲದಿಂದ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಎಲ್ಲಾ ಮಹಿಳೆಯರಲ್ಲಿ ಬ್ಯಾಂಕ್ನ ವ್ಯವಹಾರದ ಬಗ್ಗೆ ತಿಳಿದಿರುತ್ತದೆ ಎಂದು ತಿಳಿಸಿದರು.

ತಾಲೂಕಿನ ಯೋಜನಾಧಿಕಾರಿ ಪ್ರದೀಪ್, ಅಂಗವಿಕಲರಿಗೆ ಸಲಕರಣೆ ವಿತರಣೆ, ಮಾಸಾಸನ ವಿತರಣೆ, ವಾತ್ಸಲ್ಯ ಗೃಹ ನಿರ್ಮಾಣ ಕಾರ್ಯಕ್ರಮ ಇನ್ನೂ ಮೊದಲಾದ ಜನಕಲ್ಯಾಣ ಕಾರ್ಯದ ಮೂಲಕ ಬಡವರಿಗೆ ಅನುಕೂಲತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಬಂದ ಮೇಲೆ ನಮ್ಮ ಗ್ರಾಮ ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು.
ಪಿಜಿಒ ಸಂತೋಷ್ ಹಾಗೂ ಪಂಚಾಯಿತಿಯ ಉಪಾಧ್ಯಕ್ಷೆ ರಂಜಿತ ಪ್ರಕಾಶ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ದೇವಾನಂದ್ ಎನ್ ಆರ್., ನಾರಾಯಣ ಕಾಮತ್, ದೇವೇಂದ್ರಪ್ಪ, ಒಕ್ಕೂಟ ಅಧ್ಯಕ್ಷ ಸಂಜೀವ ಭಂಡಾರಿ, ವಲಯ ಮೇಲ್ವಿಚಾರಕ ಮಧುಕೇಶ್ವರ್ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ವಲಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಊರಿನ ಗಣ್ಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.