ರಿಪ್ಪನ್ಪೇಟೆ ; ಸಮಾಜ ಸೇವೆ ಯಾವುದೇ ಸಮಾಜದಲ್ಲಿ ಸೇರುವಂತಹ ಸಾಮಾಜಿಕ ಸೇವೆಯಾಗಿದೆ. ಇದು ನೆಮ್ಮದಿಯನ್ನು ನೀಡುತ್ತದೆ. ಸಮಾಜ ಸೇವೆಯು ಸಮಾಜದಲ್ಲಿ ನಾನಾ ಅವಶ್ಯಕತೆಗಳನ್ನು ಪೂರೈಸಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮತ್ತು ಸಮಾನ ಮನೋಭಾವವನ್ನು ಉತ್ತಮಗೊಳಿಸಲು ಬಳಸಲಾಗುತ್ತದೆ ಎಂದು ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ರಾಷ್ಟ್ರಾಧ್ಯಕ್ಷ ಚಿತ್ರಕುಮಾರ್ ಹೇಳಿದರು.
ಪಟ್ಟಣದ ಸತ್ಕಾರ ಭವನದಲ್ಲಿ ಆಯೋಜಿಸಲಾಗಿದ್ದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ರಿಪ್ಪನ್ಪೇಟೆ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಸಮಾಜ ಸೇವೆ ಜನರನ್ನು ಒಟ್ಟುಗೂಡುವ ಮೂಲಕ ಸಮಾಜದಲ್ಲಿ ಏಕತೆಯನ್ನು ಸ್ಥಾಪಿಸಲು ಸಹಾಯಕವಾಗುತ್ತದೆ. ಇತರರಿಗೆ ಸೇವೆ ಮಾಡುವುದರಿಂದ ಮನುಷ್ಯ ಸಂತೋಷ ಮತ್ತು ತೃಪ್ತಿ ಪಡೆಯುತ್ತಾನೆ. ಇದು ಅವರ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ ಆರ್. ಜಯೇಶ್ ಮಾತನಾಡಿ, ಸಮಾಜ ಸೇವೆಯಲ್ಲಿ ಭಾಗವಹಿಸುವ ವ್ಯಕ್ತಿಗಳು ಸಮುದಾಯಗಳಲ್ಲಿ ಪರಸ್ಪರ ಗೌರವವನ್ನು ಮತ್ತು ಸಮಾನತೆಯನ್ನು ಹೊಂದುತ್ತಾರೆ. ಸಮಾಜ ಸೇವೆ ಮೂಲಕ, ಉತ್ತಮ ಶಿಕ್ಷಣ, ಆರೋಗ್ಯ, ಮತ್ತು ಪರಿಸರ ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ಜನರ ಜೀವನವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ನೂತನ ಘಟಕದ ಸದಸ್ಯರುಗಳಿಗೆ ಪ್ರಮಾಣ ವಚನವನ್ನು ನೀಡಿ, ಇಂಟರ್ ನ್ಯಾಷನಲ್ ಸಂಸ್ಥೆಯ ಉಪಾಧ್ಯಕ್ಷೆ ಪುಷ್ಪ ಎಸ್ ಶೆಟ್ಟಿ ಮಾತನಾಡಿ, ಸಮಾಜ ಸೇವೆ ಮೂಲಕ ವ್ಯಕ್ತಿಯ ಕಡೆ ಶ್ರದ್ದೆ, ಸಮಾವೇಶ ಮತ್ತು ನಾಯಕತ್ವ ಕೌಶಲ್ಯಗಳನ್ನು ಆಲೋಚಿಸಲು ಮತ್ತು ಬೆಳೆಯಲು ಅವಕಾಶ ಒದಗಿಸುತ್ತದೆ. ಸಮಾಜ ಸೇವೆಯ ಮೂಲಕ ನಮಗೆ ಸ್ನೇಹ, ಶಾಂತಿ ಮತ್ತು ನೆಮ್ಮದಿ ಬೆಳೆಸಬಹುದು ಎಂದು ಹೇಳಿದರು.

ನೂತನ ಘಟಕದ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್, ಉಪಾಧ್ಯಕ್ಷರಾಗಿ ಲೇಖನ ನಾಯಕ್, ಕಾರ್ಯದರ್ಶಿಯಾಗಿ ಶ್ರೀಧರ್, ಸಹ ಕಾರ್ಯದರ್ಶಿಯಾಗಿ ಬಂಡಿ ನೇಮಪ್ಪ, ಖಜಾಂಚಿಯಾಗಿ ಅಜೇಶ್, ನಿರ್ದೇಶಕರಾಗಿ ಮಳವಳ್ಳಿ ದೇವರಾಜ್ ಸೇರಿದಂತೆ 20 ಜನರು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ತೀರ್ಥಹಳ್ಳಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಚ್.ಎನ್. ಸೂರ್ಯನಾರಾಯಣ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ರಾಷ್ಟ್ರೀಯ ಸಂಯೋಜಕರಾದ ಸುರೇಖಾ ಮುರಳಿಧರ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ತೀರ್ಥಹಳ್ಳಿ, ಶಿವಮೊಗ್ಗ, ಎನ್.ಆರ್.ಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪದಾಧಿಕಾರಿಗಳು ಭಾಗವಹಿಸಿದ್ದರು.