ಸೊರಬ

ಕುಬಟೂರು ಗ್ರಾಮದ ಪ್ರಾಚೀನ ಶ್ರೀ ಚಿಂತಾಮಣಿ ನರಸಿಂಹ ದೇವರ ವಿಗ್ರಹ ಭಗ್ನ – ಆರೋಪಿ ಬಂಧನ

ಸೊರಬ : ತಾಲ್ಲೂಕಿನ ಕುಬಟೂರು ಗ್ರಾಮದ ಪ್ರಸಿದ್ಧ ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರಾಚೀನ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ನಡೆದಿದೆ. ಈ ಕುರಿತು ದೇವಸ್ಥಾನ ಸಮಿತಿಯ ಎನ್. ವೆಂಕಟೇಶ್ ಅವರು ನೀಡಿದ ದೂರಿನ ಆಧಾರದಲ್ಲಿ ಆನವಟ್ಟಿ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಗ್ರಹವು ಎರಡನೇ ಶತಮಾನಕ್ಕೆ ಸೇರಿದ್ದೆಂದು ತಿಳಿದುಬಂದಿದೆ. ಮಂಗಳವಾರ ಬೆಳಗಿನ ಜಾವ ದೇವಾಲಯದ ಅರ್ಚಕ ವೇಣುಗೋಪಾಲ್ ಆಚಾರ್ ಅವರು ದೈನಂದಿನ ಪೂಜಾ ಕಾರ್ಯಕ್ಕಾಗಿ ದೇವಾಲಯ ಪ್ರವೇಶಿಸಿದಾಗ, ಬಾಗಿಲು ಭಂಗಗೊಂಡಿರುವುದು ಮತ್ತು ದೇವರ ವಿಗ್ರಹ ಬಟ್ಟೆಯಲ್ಲಿ ಆವರಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಬಟ್ಟೆ ತೆಗೆಯುತ್ತಿದ್ದಂತೆ, ವಿಗ್ರಹದ ಮುಖಭಾಗ ಭಗ್ನಗೊಂಡಿರುವುದು ಬೆಳಕಿಗೆ ಬಂದಿದೆ.

ಘಟನೆಯ ಸುದ್ದಿ ವೈರಲ್ ಆದ ತಕ್ಷಣ, ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದು ಪರಿಷತ್, ಭಜರಂಗದಳದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ದೇವಸ್ಥಾನಕ್ಕೆ ಭೇಟಿ ನೀಡಿ, ಆರೋಪಿಗಳನ್ನು ಶೀಘ್ರ ಬಂಧಿಸಲು ಆಗ್ರಹಿಸಿದರು.

inshot_20250722_2041393561754738498760051434.jpg

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಸ್ಥಳಕ್ಕೆ ಡಿವೈಎಸ್‌ಪಿ ಕೆ.ಇ. ಕೇಶವ್ ರಾವ್, ಪಿಎಸ್ಐ ಚಂದನ್ ಛಲವಾದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರ ಸ್ವಗ್ರಾಮದಲ್ಲಿ ಸಂಭವಿಸಿದ ಕಾರಣ, ಘಟನೆಗೆ ಗಂಭೀರತೆ ಸಿಕ್ಕಿದೆ.

ಪೊಲೀಸರು ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ಪರಿಶೀಲನೆಯ ವೇಳೆ, ಹಾನಗಲ್ ತಾಲೂಕಿನ ಗೋಂದಿ ಗ್ರಾಮದ ಕೋಟೇಶಪ್ಪ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ವಿಗ್ರಹವನ್ನು ಭಗ್ನಗೊಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿವಾಳ, ಈಡಿಗ, ಗಂಗಾಮತಸ್ಥರ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು

Leave a Comment