ಸೊರಬ ; ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು, ಬಕ್ರೀದ್ ಹಬ್ಬದ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಮತ್ತು ಗೋವುಗಳ ಸಾಗಾಣಿಕೆ ತಡೆಯಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಸಿ.ಪಿ. ಈರೇಶ್ ಗೌಡ ಆಗ್ರಹಿಸಿದರು.
ಶುಕ್ರವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ ಗೋ ಹತ್ಯೆ ನಡೆಯುತ್ತಿರುವುದು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಬರುತ್ತಿದೆ. ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು. ತಾಲೂಕಿನ ಮಾರ್ಗದಲ್ಲಿ ನೆರೆಯ ತಾಲೂಕುಗಳಿಗೆ ಪ್ರವೇಶಿಸುವ ವಾಹನಗಳನ್ನು ನಾಕಾ ಬಂದಿ ಹಾಕುವ ಮೂಲಕ ತಪಾಸಣೆ ನಡೆಸಿ, ಗೋವುಗಳನ್ನು ಸಾಗಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ಲೋಕೇಶ್ ಕಕ್ಕರಸಿ ಮಾತನಾಡಿ, ಗೋ ಹತ್ಯೆ ಮತ್ತು ಗೋ ಸಾಗಾಟದಲ್ಲಿ ತೊಡಗಿದ ಆರೋಪಿಗಳ ಮೇಲೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು. ಸಂಘಟನೆಯ ಕಾರ್ಯಕರ್ತರು ಅಕ್ರಮ ಗೋಸಾಗಾಟ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸುವುದು ಮತ್ತು ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ದೂರು ನೀಡುವಲ್ಲಿ ಸಕ್ರಿಯರಾಗಿದ್ದಾರೆ.
ತಾಲೂಕು ಆಡಳಿತ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಅಕ್ರಮ ಗೋ ಸಾಗಾಟವನ್ನು ತಡೆಯಬೇಕಿದೆ. ಇತ್ತೀಚೆಗೆ ದಂಧೆಕೋರರು ವಾಮಮಾರ್ಗ ಕಂಡುಕೊಂಡಿದ್ದು, ರೈತರಿಂದ ರೈತರಿಗೆ ಎಂದು ಗೋಸಾಗಾಟ ನಡೆಸುತ್ತಿದ್ದಾರೆ. ಹಬ್ಬದ ತರುವಾಯ ಅಂತಹವರ ಮನೆಗಳಲ್ಲಿ ಗೋವುಗಳು ಇವೆಯೇ ಎಂಬುದನ್ನು ಪಶು ಇಲಾಖೆ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಬೌದ್ಧಿಕ್ ಪ್ರಮುಖ್ ರಂಗನಾಥ ಮೊಗವೀರ್, ಪ್ರಮುಖರಾದ ನಾಗರಾಜ ಗುತ್ತಿ, ನವೀನ್ ಗೌಡ ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





