ಹೊಸನಗರ : ಬೆಳೆ ವಿಮೆ ಹಣ ಬಿಡುಗಡೆ ವಿಷಯದಲ್ಲಿ ಹಲವು ಲೋಪಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಒಂದು ಎಕರೆಗೆ 3,000 ರೂಪಾಯಿ ಕಟ್ಟಿಸಿಕೊಂಡು 300 ರೂಪಾಯಿ ಪರಿಹಾರ ನೀಡಿರುವುದು ಎಷ್ಟು ಸರಿ? ಎಂದು ಅಡಿಕೆ ಬೆಳೆಗಾರ ಗುಬ್ಬಿಗಾ ಸುನೀಲ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಹಿಂದಿನ ವರ್ಷ ಸಾಕಷ್ಟು ಮಳೆಯಾಗಿದೆ. ಅಡಿಕೆ ತೋಟಗಳು ಕೊಚ್ಚಿಕೊಂಡು ಹೋಗಿದೆ. ಇದರ ಜೊತೆಗೆ ಎಲೆಚುಕ್ಕಿ ರೋಗದಿಂದ ಜನರು ಕಂಗಾಲಾಗಿದ್ದಾರೆ. ಆದರೂ ಒಂದು ಎಕರೆಗೆ 300-400 ರೂ. ಬೆಳೆವಿಮೆ ನೀಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಒಂದೊಂದು ತಾಲ್ಲೂಕಿಗೆ ಒಂದೊಂದು ರೀತಿಯಲ್ಲಿ ಬೆಳೆ ವಿಮೆ ಹಣ ನೀಡಬೇಕಿತ್ತು. ಅದನ್ನು ಬಿಟ್ಟು ಮಳೆಯಿಲ್ಲದ ತಾಲ್ಲೂಕುಗಳಿಗೆ ಹೆಚ್ಚು ಬೆಳೆ ವಿಮೆ ಹಣ ನೀಡಿರುವುದು ಹೆಚ್ಚು ಮಳೆಯಾದ ಬೆಳೆ ನಷ್ಟವಾದ ಪ್ರದೇಶಗಳಿಗೆ ಕಡಿಮೆ ಬೆಳೆ ವಿಮೆ ಹಣ ಜಮಾ ಮಾಡಿರುವುದು ಸರಿಯದ ಕ್ರಮವಲ್ಲ ವಿಮೆ ಮಾಡಿಸಲು ಬೆಳೆಗಾರರೂ ವಿಮಾ ಕಂತು ಕಟ್ಟಿದ್ದಾರೆ ಎನ್ನುವುದನ್ನು ಸರ್ಕಾರಗಳು ಮರೆಯಬಾರದು. ಹವಾಮಾನದಲ್ಲಿನ ಏರುಪೇರಿನಿಂದ ಆಗುವ ಬೆಳೆ ನಷ್ಟಕ್ಕೆ ನೀಡುವ ಈ ಪರಿಹಾರ ಮೊತ್ತ ಲೆಕ್ಕಾಚಾರ ಮಾಡುವ ವೇಳೆ ಅಧಿಕಾರಿಗಳಿಂದ ತಪ್ಪು ಆಗಿರುವ ಸಂಭವವಿದೆ. ಆದರೆ ಈ ಬಗ್ಗೆ ಪುನರ್ಪರಿಶೀಲನೆ ನಡೆಸಲು ಮುಂದಾಗಬೇಕು. ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರು ವಿಶೇಷ ಕಾಳಜಿ ವಹಿಸಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

