ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನಲ್ಲಿ, ಯಾವುದೇ ವ್ಯಕ್ತಿಯು ಕಟ್ಟಡ ನಕ್ಷೆ ಮಂಜೂರಾತಿ ಮತ್ತು ಸ್ವಾಧೀನ ಪ್ರಮಾಣಪತ್ರ (Occupancy Certificate) ಇಲ್ಲದೆ ಮನೆ ನಿರ್ಮಿಸಬಾರದು ಎಂದು ಸೂಚಿಸಲಾಗಿದೆ. ಈ ತೀರ್ಪಿನ ಅನ್ವಯ, ಅಂತಹ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಲು ಅವಕಾಶವಿಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ತೀರ್ಪಿನ ಬೆನ್ನಲ್ಲೇ, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ರಾಜ್ಯಾದ್ಯಂತ ಅನೇಕ ಮನೆಗಳು ಅನುಮತಿ ಇಲ್ಲದೆ ನಿರ್ಮಾಣಗೊಂಡಿವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ಅನ್ವಯ, ಅನುಮತಿ ಇಲ್ಲದ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ನೀಡುವುದು ಕಾನೂನಾತ್ಮಕವಾಗಿಲ್ಲ. ಜನರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಮನೆ ಕಟ್ಟಬಾರದು,” ಎಂದು ತೀವ್ರವಾಗಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚು ಮನೆಗಳು ನಕಲಿ ಅಥವಾ ಯಾವುದೇ ಸರಕಾರೀ ಅನುಮತಿಯಿಲ್ಲದೆ ನಿರ್ಮಾಣಗೊಂಡಿದ್ದು, ಈ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸಲ್ಲಿಸಲಾದ ಅರ್ಜಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಸ್ಥಳೀಯ ನಗರಾಭಿವೃದ್ಧಿ ಇಲಾಖೆಗಳು ಮತ್ತು ಪುರಸಭೆಗಳು ಕಟ್ಟಡ ನಕ್ಷೆ ಮಂಜೂರಾತಿ ನೀಡದೆ ಇಂತಹ ಮನೆಗಳಿಗೆ ಅನುಮತಿ ನೀಡಿದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

