ರಿಪ್ಪನ್ಪೇಟೆ ; ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುವ ಮೂಲಕ ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಕಾರ್ಯಕ್ರಮಗಳಿಂದಾಗಿ ಅಭಿವೃದ್ದಿಗೆ ನಯಾಪೈಸೆ ಸಹ ಬಿಡುಗಡೆಯಾಗುತ್ತಿಲ್ಲ ಇನ್ನೂ ಕ್ಷೇತ್ರದ ಮತ್ತು ಮತದಾರರ ಆಶೋತ್ತರಗಳನ್ನು ಹೇಗೆ ಮಾಡುವುದು ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತರುವ ಮೂಲಕ ಅಭಿವೃದ್ದಿಪಡಿಸಲಾಗಿತ್ತು. ಈ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ಕೂಡಾ ಅಭಿವೃದ್ದಿ ಕಾರ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಇನ್ನು ಹೇಗೆ ನಿಮ್ಮ ಮನವಿಗಳಗೆ ಸ್ಪಂದಿಸುವುದಾದರೂ ಹೇಗೆ ನಮಗೆ ನಾಚಿಕೆಯಾಗುತ್ತಿದೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ಮಾಡುತ್ತೇವೆಂದು ಹೇಳಿ ನಿಮಗೆ ಮುಖ ತೋರಿಸಲು ಆಗದಂತಾಗಿದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಮಾಧ್ಯಮದವರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.
ಈ ಹಿಂದೆ ವಿದ್ಯುತ್ ಕಂಬಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಸಿಗುವಂತಹ ದರವನ್ನು ಮೆಸ್ಕಾಂ ಇಲಾಖೆಯವರು ಇತ್ತೀಚೆಗೆ ಟೆಂಡರ್ ಕರೆಯುವ ಮೂಲಕ ದುಬಾರಿ ಬೆಲೆಗೆ ಹೆಚ್ಚಿಸಿರುವುದು ಇದರಿಂದಾಗಿ ಸಾಮಾನ್ಯ ರೈತಾಪಿ ವರ್ಗ ವಿದ್ಯುತ್ ಸೌಲಭ್ಯ ಪಡೆಯುವಲ್ಲಿ ಸಹ ವಂಚಿತರನ್ನಾಗಿಸಿದೆ. ಅಲ್ಲದೆ ಅಂಗಡಿ, ಹೋಟೆಲ್ ವಾಣಿಜ್ಯ ವಹಿವಾಟು ನಡೆಸುವ ಸಣ್ಣ, ಮಧ್ಯಮ ಜನತೆಗೆ ವಿದ್ಯುತ್ ದರವನ್ನು ಏಕಾಏಕಿ ಹೆಚ್ಚಿಸುವ ನಿರ್ಧಾರದಿಂದಾಗಿ ಅವರು ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಸರ್ಕಾರ ಅವರ ಬದುಕಿನ ಜೊತೆ ಚೆಲ್ಲಾಟವಾಡುವಂತೆ ಮಾಡಿದೆ ಎಂದು ಕಟುವಾಗಿ ಟೀಕಿಸಿದರು.
ಇಷ್ಟು ಭ್ರಷ್ಟ ಸರ್ಕಾರವನ್ನು ಈ ಹಿಂದೆ ನಾವು ಕಂಡಿರಲ್ಲಿಲ್ಲ ಎಂದು ಅವರು, ಗ್ಯಾರಂಟಿಯಿಂದಾಗಿ ಸರ್ಕಾರಿ ನೌಕರರಿಗೂ ಖಾಸಗಿ ಉದ್ಯೋಗಿಗಳಿಗೆ ತಿಂಗಳ ವೇತನಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದ್ದು ಇನ್ನೂ ದುಬಾರಿ ಬೆಲೆ ಏರಿಕೆಯಿಂದಾಗಿ ಬಡನಾಗರೀಕರು ಮಧ್ಯಮ ವರ್ಗದವರು ಬದುಕು ಹೇಳದಂತಾಗಿದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.
ಈಗಾಗಲೇ ಸರ್ಕಾರ ಬಸ್ ಮತ್ತು ವಿದ್ಯುತ್ ಬಿಲ್ ಮತ್ತು ಬೆಲೆಯನ್ನು ಹೆಚ್ಚಿಸುವ ಮೂಲಕ ಜನರನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.