ಮಲ್ನಾಡ್ ಟೈಮ್ಸ್ ವಿಶೇಷ
ರಿಪ್ಪನ್ಪೇಟೆ : ಕಳೆದ ವರ್ಷದ ಜೂನ್ ಅಂತ್ಯದೊಳಗೆ 4400.9 ಮಿ.ಮೀ. ಮಳೆಯಾಗಿದ್ದು ಈ ವರ್ಷದ ಜೂನ್ ಆಂತ್ಯದಲ್ಲಿ ಕೇವಲ 1158.1 ಮಳೆಯಾಗಿದ್ದು ವಾಡಿಕೆಗಿಂತ 2691.6 ಮಿ.ಮೀ. ಅತ್ಯಂತ ಮಳೆ ಕಡಿಮೆಯಾಗಿ ಹೊಸನಗರ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗುವುದರೊಂದಿಗೆ ಕೃಷಿ ಚಟುವಟಿಕೆ ಮಾಡಲಾಗದೆ ರೈತಾಪಿ ವರ್ಗ ಮುಗಿಲು ನೋಡುವಂತಾಗಿದ್ದು ಇಳುವರಿ ಸಹ ಕುಂಠಿತವಾಗಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಭದ್ರಪ್ಪ ತಿಳಿಸಿದರು.
ರಿಪ್ಪನ್ಪೇಟೆಯ ರೈತ ಸಂಪರ್ಕ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 2026 ರಿಂದ ಜೂನ್ 2026 ರವರಗೆ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ 682.2 ಮಿ.ಮೀ. ಆಗಬೇಕಾಗಿದ್ದು ಈವರೆಗೆ ಕೇವಲ 304.8 ಮಿ.ಮೀ ಮಳೆಯಾಗಿ ಶೇ. 55 ರಷ್ಟು ಮಳೆ ಕಡಿಮೆಯಾಗಿದೆ.
ಹುಂಚ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 538.8 ಮಿ.ಮೀ. ಇದ್ದು ಈವರೆಗೆ ಕೇವಲ 263.4 ಮಿ.ಮೀ. ಮಳೆಯಾಗಿದ್ದು ಶೇ. 51 ರಷ್ಟು ಮಳೆ ಕಡಿಮೆಯಾಗಿದೆ. ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 399.8 ಮಿ.ಮೀ. ಆಗಿದ್ದು ಈತನಕ 278.5 ಮಿ.ಮೀ. ಮಳೆಯಾಗಿದ್ದು ಶೇ. 30 ರಷ್ಟು ಮಳೆ ಕಡಿಮೆಯಾಗಿದೆ.
ನಗರ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 1070.2 ಮಿ.ಮೀ. ಬೀಳಬೇಕಾಗಿದ್ದು ಈವರೆಗೆ ಬಿದ್ದ ಮಳೆ ಕೇವಲ 311.3 ಮಿ.ಮೀ. ಮಳೆಯಾಗಿ ಶೇ. 71 ಮಿ.ಮೀ. ಮಳೆ ಕಡಿಮೆಯಾಗಿದ್ದು ಸಕಾಲದಲ್ಲಿ ಮಳೆಯಾಗದಿರುವುದರಿಂದಾಗಿ ಭೂಮಿಯಲ್ಲೂ ನೀರಿಲ್ಲದೆ ರೈತರು ತಲೆ ಮೇಲೆ ಕೈಹೊತ್ತು ಮೇಲೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಬಿತ್ತನೆ ಕುಂಠಿತ :
ಪ್ರಸ್ತುತ ತಾಲ್ಲೂಕಿನಲ್ಲಿ ವಾಡಿಕೆಗಿಂತ 2691.6 ಮಿ.ಮೀ. ಮಳೆ ಕಡಿಮೆಯಾಗಿದ್ದು ಇದರಿಂದಾಗಿ ಅಂತರ್ಜಲ ಸಹ ಕುಂಠಿತಗೊಂಡಂತಾಗಿದೆ. ಈಗಾಗಲೇ ಹೊಸನಗರ ತಾಲ್ಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯ 120 ಹೆಕ್ಟೇರ್ ಕಬ್ಬು ಬಿತ್ತನೆ ಹಾಗೂ 250 ಹೆಕ್ಟೇರ್ ಮೆಕ್ಕೆಜೋಳ ಮಾಡುವ ಗುರಿ ಹೊಂದಲಾಗಿದ್ದು ಪ್ರಸಕ್ತ ವರ್ಷದಲ್ಲಿ 110 ಹೆಕ್ಟೇರ್ ಕಬ್ಬು ಹಾಗೂ 180 ಹೆಕ್ಟೇರ್ನಲ್ಲಿ ಮೆಕ್ಕೆಜೋಳದ ಬಿತ್ತನೆ ಪ್ರಗತಿಯಲ್ಲಿದೆ.
ಬಿತ್ತನೆ ಬೀಜದ ಕೊರತೆ ಇಲ್ಲ :
ಹವಾಮಾನ ತಳಿಗಳಾದ ಹೆಚ್ಚು ಇಳುವರಿ ಕೊಡುವ ಭತ್ತದ ತಳಿಗಳಾದ ಎಂ.ಟಿ.ಯು 1001, ಆರ್.ಎನ್.ಆರ್ 15048 ಹಾಗೂ ಉಮಾ ಮತ್ತು ಸಹ್ಯಾದ್ರಿ ಕೆಂಪುಮುಕ್ತಿ ಹಾಗೂ ಮೆಕ್ಕೆಜೋಳದ ತಳಿಗಳಾದ ಕೆಎಂಹೆಚ್ 517 ಕೆಎಂಹೆಚ್ ಸೂಪರ್ 244 ಹಾಗೂ ಇನ್ನೂ ಕೆಎಂಹೆಚ್ 25, ಕೆ 55 ಮತ್ತು ಪಿ 3305 ವಿಶೇಷ ತಳಿಯ ಬಿತ್ತನೆ ಬೀಜಗಳು ದಾಸ್ತಾನು ಮಾಡಿಕೊಳ್ಳಲಾಗಿದ್ದು ಬಿತ್ತನೆ ಬೀಜದ ಕೊರತೆ ಇಲ್ಲ ಎಂದರು.
ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮಾರುತಿ ಎಂ.ಎಸ್, ಹುಂಚ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್, ಇನ್ನಿತರ ಸಿಬ್ಬಂದಿವರ್ಗ ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





