ರಿಪ್ಪನ್ಪೇಟೆ ; “ಭಕ್ತಿಯಿಂದ ದೇವ-ಗುರು-ಶಾಸ್ತ್ರ ಪೂಜೆಯಿಂದ ವಿಕೃತ ಭಾವಗಳು ಕ್ಷಯಿಸುತ್ತವೆ. ಭಕ್ತಿಯಿಂದ ಧರ್ಮಾಚರಣೆಯು ಸುಕೃತ ಫಲ ನೀಡುವುದು ಮತ್ತು ಶ್ರೇಷ್ಠವಾದುದು” ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪ್ರವಚನದಲ್ಲಿ ತಿಳಿಸಿದರು.

ವಿಶ್ವಾವಸು ಸಂವತ್ಸರದ ಶ್ರಾವಣ ಮಾಸದ ಪಂಚಮ ಸಂಪತ್ ಶುಭ ಶುಕ್ರವಾರದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶೋಡಷೋಪಚಾರ ಪೂಜೆ ಮತ್ತು ವಿಶೇಷ ಪುಷ್ಪ-ಫಲ-ಶರ್ಕರ-ನೈವೇದ್ಯ-ಧಾನ್ಯಗಳನ್ನು ಭಕ್ತರು ಅರ್ಪಿಸಿದರು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಅದಿನಾಥ ಸ್ವಾಮಿ ಶ್ರೀ ಸರಸ್ವತಿ ದೇವಿ ಹಾಗೂ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಧಿಯಲ್ಲಿ ಭಕ್ತರು ಸ್ತೋತ್ರಗಳನ್ನು ಸ್ತುತಿಸಿ ಪೂಜೆ ಸಲ್ಲಿಸಿದರು.

ಶ್ರೀ ಪದ್ಮರಾಜ ಇಂದ್ರ ಸಹ ಅರ್ಚಕರು ಜಿನಾಗಮೋಕ್ತ ವಿಧಿಯಂತೆ ಪೂಜೆ ನೆರವೇರಿಸಿದರು. ಸ್ವಸ್ತಿಶ್ರೀಗಳವರು ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಊರ ಪರವೂರ ಭಕ್ತರು ಧನ್ಯರಾದರು. ಶ್ರೀಮಠದ ವತಿಯಿಂದ ಉಪಾಹಾರ, ಅನ್ನಪ್ರಸಾದ ವ್ಯವಸ್ಥೆ ವಸತಿ ಸೌಲಭ್ಯ ಅಚ್ಚುಕಟ್ಟಾಗಿ ಒದಗಿಸಲಾಗಿತ್ತು.


