ಹೊಸನಗರ : ತಾಲ್ಲೂಕಿನ ಗರ್ತಿಕೆರೆಯ ಅವುಕ ಸರ್ಕಲ್’ನಲ್ಲಿ ತಡರಾತ್ರಿ ಭೀಕರ ಹಿಂಸಾಚಾರ ನಡೆದಿದೆ. ಮದ್ಯಪಾನ ಮಾಡುತ್ತಿದ್ದ ಮಂಜುನಾಥ್ ಮತ್ತು ರಾಘವೇಂದ್ರ ಎಂಬ ಇಬ್ಬರು ಸ್ನೇಹಿತರ ನಡುವೆ ಜಗಳ ಉಂಟಾಗಿ ನಡು ರಸ್ತೆಯಲ್ಲೇ ಸ್ನೇಹಿತನಿಗೆ ರಾಡ್ನಿಂದ ಹೊಡೆದು, ತಲೆ ಮೇಲೆ ನಿಂತು ವಿಕೃತಿ ಮೆರೆಯಲಾಗಿದೆ.

ಏನಿದು ಘಟನೆ ?
ಸ್ನೇಹಿತರಾದ ಮಂಜುನಾಥ್ ಮತ್ತು ರಾಘವೇಂದ್ರ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಆದಾಗ್ಯೂ, ಮಂಜುನಾಥ್ ನಶೆಯಲ್ಲಿ ಇದ್ದ ಸಂದರ್ಭದಲ್ಲಿ, ರಾಘು ಅಲಿಯಾಸ್ ರಾಘವೇಂದ್ರ ಆತನ ಮೇಲೆ ಭೀಕರ ದಾಳಿ ನಡೆಸಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ಮಂಜುನಾಥನನ್ನು ಕಬ್ಬಿಣದ ರಾಡ್ ಬಳಸಿ ಬಲವಾಗಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಗಾಯಗೊಂಡ ಮಂಜುನಾಥ್ ರಕ್ತಸಿಕ್ತವಾಗಿ ಬಿದ್ದಿದ್ದು ರಾಘವೇಂದ್ರ ಆತನ ಎದೆ ಹಾಗೂ ತಲೆ ಮೇಲೆ ಹತ್ತಿ ನಿಂತು ಅಮಾನುಷ ಕೃತ್ಯ ಎಸಗಿದ್ದಾನೆ. ಸ್ಥಳೀಯರು ಇದನ್ನು ನೋಡಿದಾಗ, ರಾಘವೇಂದ್ರ “ನಾನೇನೂ ಮಾಡಿಲ್ಲ” ಎಂದು ಸುಳ್ಳು ಹೇಳಿ ತನ್ನ ತಪ್ಪುಗಳನ್ನು ಮರೆಮಾಚಲು ಯತ್ನಿಸಿದ್ದಾನೆ. ಅಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಜುನಾಥನನ್ನು ಕಾಲು ಹಿಡಿದು ರಸ್ತೆಯಲ್ಲೇ ಬಲವಂತವಾಗಿ ಎಳೆದುಕೊಂಡು ಹೋಗಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.

ಸ್ಥಳೀಯರು ಕೂಡಲೇ ಈ ಘಟನೆ ಬಗ್ಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ರಾಘವೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡ ಮಂಜುನಾಥನನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

