ಹೊಸನಗರ ; ಇನ್ನೊಂದು ತಿಂಗಳಲ್ಲಿ 110 ಕೆ.ವಿ. ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗದಿದ್ದರೆ ಗಂಜಿ ಕೇಂದ್ರ ಸ್ಥಾಪಿಸಿ ಉಗ್ರ ಹೋರಾಟ ; ದುಮ್ಮ ವಿನಯ್‌ಕುಮಾರ್ ಎಚ್ಚರಿಕೆ

Written by Mahesha Hindlemane

Updated on:

ಹೊಸನಗರ ; ಇನ್ನೊಂದು ತಿಂಗಳಲ್ಲಿ ಹೊಸನಗರಕ್ಕೆ 110 ಕೆ.ವಿ. ಸ್ಥಾವರ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೊಸನಗರದ ಮೆಸ್ಕಾಂ ಇಲಾಖೆಯ ಮುಂದೆ ಅಥವಾ ತಾಲ್ಲೂಕು ಕಛೇರಿಯ ಮುಂದೆ ಗಂಜಿ ಕೇಂದ್ರ ತೆರೆದು ಒಂದೊಂದು ಗ್ರಾಮದ ಗ್ರಾಮಸ್ಥರಿಂದ ಹೋರಾಟ ನಡೆಸುತ್ತೇವೆ ಎಂದು ಕಳೂರು ಸೊಸೈಟಿಯ ಅಧ್ಯಕ್ಷ ಹಾಗೂ ಸಹಕಾರ ಒಕ್ಕೂಟದ ಸದಸ್ಯ ದುಮ್ಮ ವಿನಯ್‌ಕುಮಾರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾವಿನಕೊಪ್ಪದಿಂದ ತಾಲ್ಲೂಕು ಕಛೇರಿಯವರೆಗೆ 110 ಕೆ.ವಿ. ವಿದ್ಯುತ್ ಸ್ಥಾಪಿಸಬೇಕೆಂದು ಹೊಸನಗರ ತಾಲ್ಲೂಕು ಸಹಕಾರಿ ಒಕ್ಕೂಟದಿಂದ ಹೋರಾಟ ಹಮ್ಮಿಕೊಂಡಿದ್ದು ತಹಸೀಲ್ದಾರ್ ಭರತ್‌ರಾಜ್‌ರಿಗೆ ಹಾಗೂ ಮೆಸ್ಕಾಂ ಇಂಜಿನಿಯರ್ ಚಂದ್ರಶೇಖರ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಯೋಜನೆಗೆ ಅನೇಕ ಗ್ರಾಮಗಳು ಮುಳುಗಡೆ ಆಗಿ ಜಮೀನು ಕಳೆದುಕೊಂಡು ಸಾವಿರಾರು ರೈತ ಕುಟುಂಬಗಳು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಹೊಸನಗರ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದು ಇನ್ನೂ ಕೂಡ ಕತ್ತಲೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಆರು ದಶಕಗಳ ಹೆಚ್ಚು ಕಾಲದಲ್ಲಿ ವಿದ್ಯುತ್ತಿಗಾಗಿ ಭೂಮಿ ಕಳೆದುಕೊಂಡು ಪುನರ್ ವಸತಿಯನ್ನೂ ಸಹ ಕಲ್ಪಿಸದೇ ಹಾಗೂ ವಿದ್ಯುತ್ ಸಂಪರ್ಕವೂ ಸಹ ಸಮರ್ಪಕವಾಗಿ ಇಲ್ಲದೇ ಈ ತಾಲ್ಲೂಕಿನಲ್ಲಿ ಜನ ಜೀವನದ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು ಸರ್ಕಾರದಿಂದ ವಿದ್ಯುತ್ ಪೂರೈಕೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ದಿನನಿತ್ಯದ ಬಳಕೆಯ ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ಇಲ್ಲದೇ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತಿನಲ್ಲಿ ಓದಲು ತೊಂದರೆಯಾಗುತ್ತಿದೆ ಹಾಗೂ ಗೃಹಬಳಕೆಯ ವಸ್ತು ಮಿಕ್ಸಿ, ಗ್ರೈಂಡರ್ ಚಾಲನೆ ಕಷ್ಟವಾಗಿರುತ್ತದೆ. ರೈತರ ಪಂಪ್‌ಸೆಟ್ ಬಳಕೆಗೆ ವಿದ್ಯುತ್ ವೋಲ್ಟೇಜ್ ಇಲ್ಲದೇ ಬಹಳ ತೊಂದರೆಯಾಗುತ್ತಿದ್ದು, ಉದ್ಯಮಿಗಳಿಗೆ ಉದ್ಯಮ ನಡೆಸಲು ಸಹ ವಿದ್ಯುತ್ ಇಲ್ಲದೆ ಬಹಳ ತೊಂದೆರೆಯಾಗುತ್ತಿದ್ದು ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕೂಡಲೇ ವಿದ್ಯುತ್ ಸ್ಥಾವರ 110 ಕೆ.ವಿ ಸ್ಥಾಪಿಸಬೇಕು ಇದಕ್ಕೆ ಹೊಸನಗರ ತಾಲ್ಲೂಕಿನಲ್ಲಿರುವ ಯಾವುದೇ ಸಂಘ-ಸಂಸ್ಥೆಯವರು ಹೋರಾಟಕ್ಕೆ ಕರೆ ನೀಡಿದರೂ ಎಲ್ಲರೂ ಒಗ್ಗಟಾಗಿ ಹೋರಾಟ ನಡೆಸಬೇಕೆಂದರು.

ಮೂರು ಪಕ್ಷದಿಂದ ನಿರ್ಲಕ್ಷ್ಯ : ವಾಟಗೋಡು ಸುರೇಶ್

110 ಕೆವಿ ಸ್ಥಾವರ ಸ್ಥಾಪನೆ ಹೋರಾಟ ಸಮಿತಿಯ ನೇತೃತ್ವ ವಹಿಸಿ ಮಾತನಾಡಿದ ವಾಟಗೋಡು ಸುರೇಶ್, ಸುಮಾರು 65 ವರ್ಷಗಳ ಕಾಲದಿಂದ ಹೊಸನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ವಿದ್ಯುತ್ ಸಮಸ್ಯೆ ಇದೆ 65ವರ್ಷಗಳಲ್ಲಿ ಕಾಂಗ್ರೇಸ್, ಜೆಡಿಎಸ್, ಹಾಗೂ ಬಿಜೆಪಿ ಪಕ್ಷಗಳು ಕರ್ನಾಟಕ ಸರ್ಕಾರ ಆಡಳಿತ ನಡೆಸಿದ್ದು ನಮ್ಮ ಕ್ಷೇತ್ರದ ಶಾಸಕರು 110 ಸ್ಥಾವರದ ಬಗ್ಗೆ ಯಾರು ಶಾಸನ ಸಭೆಯಲ್ಲಿ ಮಾತನಾಡಿದೇ ಇರುವುದೇ 110 ಸ್ಥಾಪನೆಯಾಗದಿರುವುದಕ್ಕೆ ಕಾರಣವಾಗಿದೆ. ನಾವು ಒಂದು ದಿನ ಹೋರಾಟ ಮಾಡಿ ಬಿಡುವುದಿಲ್ಲ 110 ಸ್ಥಾವರ ಸ್ಥಾಪನೆಯಾಗುವವರೆಗೆ ಹೋರಾಟ ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರದಲ್ಲಿ ಈವರೆಗೂ 110 ಕೆವಿ ವಿದ್ಯುತ್ ಸ್ಥಾವರ ಆಗದಿರುವುದು ದುರದೃಷ್ಟಕರ. ಹಿಂದೆ ತಾವು ಅಧಿಕಾರದಲ್ಲಿದ್ದಾಗ ಹರಿದ್ರಾವತಿಯಲ್ಲಿ 33 ಕೆವಿ ವಿದ್ಯುತ್ ಸ್ಥಾವರ ಮಂಜೂರು ಮಾಡಿಸಿದ್ದೆ. ಸಾಗರದಲ್ಲಿಯೂ ನೂತನ ಸ್ಥಾವರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿನ ಜನರಿಗೆ ಗುಣಮಟ್ಟದ ವಿದ್ಯುತ್ ಸಿಗಬೇಕು ಎನ್ನುವ ಇಲ್ಲಿನ ಜನರ ಬೇಡಿಕೆ ನ್ಯಾಯೋಚಿತವಾಗಿದೆ ಎಂದ ಅವರು, ರಾಜ್ಯ ಸರಕಾರ ನೂತನ ಸ್ಥಾವರ ಕಾಮಗಾರಿಗೆ ಮಂಜೂರಾತಿ ನೀಡಿ ಅನುದಾನ ಒದಗಿಸಿದಲ್ಲಿ ಅಗತ್ಯ ಬಿದ್ದಲ್ಲಿ ಕೇಂದ್ರ ಅರಣ್ಯ ಇಲಾಖೆಯಿಂದ ನಿರಪೇಕ್ಷಣೆ ಪಡೆಯಲು ಸಂಸದರ ಮೂಲಕ ತಾವು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ ಜಯರಾಂ, ಜಿ ಎಸ್ ಅನಂತರಾವ್ ಗುಬ್ಬಿಗ, ಕಲ್ಯಾಣಪ್ಪ ಗೌಡರು, ಮಾಸ್ತಿಕಟ್ಟೆ ಸುಬ್ರಮಣ್ಯ ಮುರುಳಿ, ಜಿ.ಎಸ್ ರವಿ, ಉಮೇಶ್ ಹಾಲಗದ್ದೆ, ಬಾಬು ಕಾಮತ್, ಹಾಲಪ್ಪಗೌಡ, ಮಿಲ್ ಈಶ್ವರಪ್ಪ, ರಾಜು ಕಾಮತ್, ಜಿ.ಟಿ ಈಶ್ವರಪ್ಪ ಗೌಡ, ಗುಬ್ಬಿಗ ಸುನೀಲ್, ಶ್ರೀಪತಿರಾವ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಮಂಡಾನಿ ಮೋಹನ, ಚಾಲುಕ್ಯ ಬಸವರಾಜ್ ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment