ಹೊಸನಗರ ; ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಕಾಯ್ದೆ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ಸ್ವಾಗತಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಇದಕ್ಕೆ ಪೂರಕವಾಗಿ ಸಂವಿಧಾನ ತಿದ್ದುಪಡಿ ವಿಧೇಯಕವನ್ನೂ ಮಂಡನೆ ಮಾಡುವ ಕುರಿತು ಕೇಂದ್ರ ಮಾಹಿತಿ ನೀಡಿದೆ. ಇದೊಂದು ಬಹುನಿರೀಕ್ಷಿತ ಹಾಗೂ ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.
ಹೊಸ ವಿಧೇಯಕ ಅಂಗೀಕಾರವಾದಲ್ಲಿ ರಾಜ್ಯದಲ್ಲಿ ಹೊಸನಗರವೂ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳು ಹೊಸದಾಗಿ ರಚನೆಯಾಗುವ ಸಂಭವ ಕಂಡುಬಂದಿದೆ. ಕಳೆದ ಎರಡು ದಶಕಗಳಿಂದ ಕ್ಷೇತ್ರಕ್ಕಾಗಿ ಜನರ ಬೇಡಿಕೆಯಿದೆ. ಈ ಹಿಂದೆ ನಡೆದ ಮರುವಿಂಗಡಣೆ ಸಂದರ್ಭದಲ್ಲಿಯೂ ಈ ಬಗ್ಗೆ ಬೇಡಿಕೆ ಇಟ್ಟಿದ್ದರೂ ಸಫಲವಾಗಿರಲಿಲ್ಲ. ಆದರೆ ಈಗ ಕೇಂದ್ರ ಸರಕಾರ ಸ್ವಯಂಪ್ರೇರಿತವಾಗಿ ಕ್ಷೇತ್ರ ಮರುವಿಂಗಡಣೆ ಹಾಗು ಹೆಚ್ಚು ಕ್ಷೇತ್ರಗಳನ್ನು ರಚನೆ ಮಾಡಲು ಮುಂದಾಗಿರುವುದು ಉತ್ತಮ ನಿರ್ಧಾರವಾಗಿದೆ ಎಂದಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಪಾದಯಾತ್ರೆ ಕೈಬಿಡಲು ಆಗ್ರಹ ;
ಈಗಾಗಲೇ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಮುಂದಾಗಿದ್ದು, ಜಿಲ್ಲೆಯಲ್ಲಿ ಹೊಸನಗರ, ಶಿರಾಳಕೊಪ್ಪ, ಆಯನೂರು, ಹೊಳೆಹೊನ್ನೂರು ಕ್ಷೇತ್ರಗಳ ರಚನೆ ಘೋಷಣೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಏ.5 ಮತ್ತು 6ರಂದು ಕ್ಷೇತ್ರ ರಚನೆಗೆ ಆಗ್ರಹಿಸಿ ಪಾದಯಾತ್ರೆ ಮತ್ತಿತರರ ಹೋರಾಟ ನಡೆಸುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಶ್ರಮ ಸಮಯ ವ್ಯರ್ಥಗೊಳಿಸಿ ಈಗ ಪಾದಯಾತ್ರೆ ಮಾಡುವ ಮೂಲಕ ಜನಜಾಗೃತಿ, ಸರ್ಕಾರಕ್ಕೆ ಆಗ್ರಹ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

