ರಿಪ್ಪನ್ಪೇಟೆ : ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಶಾಖೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಭಾರಿ ಮಳೆ ಬಂದರೆ ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಛತ್ರಿ ಹಿಡಿದುಕೊಂಡು ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವ ದುಸ್ಥಿತಿಯಲ್ಲಿನ ಕಟ್ಟಡದಲ್ಲಿ ಬ್ಯಾಂಕ್ ವ್ಯವಹಾರ ಮಾಡುವ ಗ್ರಾಹಕರು ಜೀವಭಯದಲ್ಲಿ ವ್ಯವಹರಿಸುವಂತಾಗಿದೆ ಎಂದು ಗ್ರಾಹಕರು ಮಾಧ್ಯಮದವರ ಮುಂದೆ ಕಟ್ಟಡದ ದುಸ್ಥಿಯ ಸ್ಥಿತಿಯನ್ನು ವಿವರಿಸಿದರು.
ನಗದು ಕೌಂಟರ್ ಬಳಿಯ ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಗಾರೆ ಉದುರಿ ಬೀಳುತ್ತಿದ್ದು ಎಲ್ಲಿ ತಲೆ ಮೇಲೆ ಬೀಳುವುದೋ ಎಂಬ ಭಯದಲ್ಲಿ ಗ್ರಾಹಕರು ಮೇಲೆ ನೋಡುವಂತಾಗಿದ್ದರೆ, ಈ ಶಾಖಾ ಕಟ್ಟಡದಲ್ಲಿ ಅಧಿಕಾರಿ ವರ್ಗ ಕೆಲಸ ಮಾಡಲು ಹಿಂಜರಿಕೆಯಿದ್ದರೂ ಅನಿರ್ವಾಯವಾಗಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಗ್ರಾಹಕರು ತಮ್ಮ ನೋವಿನೊಂದಿಗೆ ನಮ್ಮ ಹಾಗೇ ಅವರು ಮನುಷ್ಯರಲ್ಲವೇ? ಅವರ ಮೇಲೆ ಬಿದ್ದರೆ ಏನು ಗತಿ ಎಂದು ಮರುಕಪಟ್ಟು ಈಗಾಗಲೇ ಈ ಕಟ್ಟಡವನ್ನು ಬೇರೆಡೆ ಸ್ಥಳಾಂತರ ಮಾಡುವ ಬಗ್ಗೆ ನೂತನ ಕಟ್ಟಡವನ್ನು ನೋಡಲಾಗಿದ್ದು ಆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಬ್ಯಾಂಕ್ಗೆ ಹಸ್ತಾಂತರ ಸಹ ಮಾಡಲಾದರೂ ಕೂಡಾ ಇನ್ನೂ ಮುಹೂರ್ತ ಕೂಡಿ ಬಂದಂತೆ ಕಾಣುತ್ತಿಲ್ಲವೆಂದು ಹೇಳಲಾಗುತ್ತಿದೆ.

ತಾಂತ್ರಿಕ ಕಾರಣ ನೀಡಿ ಮುಂದೂಡುತ್ತಿರುವ ಬ್ಯಾಂಕ್ ಆಡಳಿತ :
ಈಗಾಗಲೇ ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿ ಬ್ಯಾಂಕ್ ಕಟ್ಟಡವನ್ನು ಬಾಡಿಗೆ ಪಡೆಯಲಾಗಿದ್ದು ಆ ಕಟ್ಟಡದ ಕಾಮಗಾರಿ ಪೂರ್ಣವಾಗಿದ್ದರೂ ಕೂಡಾ ತಾಂತ್ರಿಕ ಕಾರಣ ಒಡ್ಡಿ ಅಧಿಕಾರಿಗಳು ಶಾಖಾ ಕಛೇರಿಯನ್ನು ಸ್ಥಳಾಂತರ ಮಾಡಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ.
ಲೇಖನವನ್ನು ಮುಂದುವರಿಸಿ ಓದಿ
ಮಳೆಗಾಲದಲ್ಲಿ ಛತ್ರಿ ಇಲ್ಲದೆ ಬ್ಯಾಂಕ್ ಒಳಗೆ ಹೋಗಲಾಗದು :
ಮಳೆ ಬಂತು ಎಂದರೆ ಸಾಕು ಬ್ಯಾಂಕ್ ಗ್ರಾಹಕರು ನಗದು ಹಣ ಇನ್ನಿತರ ಕೆಲಸಕ್ಕಾಗಿ ಈ ಕಟ್ಟಡದ ಒಳಗೆ ಹೋದರೂ ಛತ್ರಿ ಹಿಡಿದುಕೊಂಡೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕಛೇರಿಯ ಅಧಿಕಾರಿಗಳು ಮೇಲ್ಚಾವಣಿಗೆ ಪ್ಲಾಸ್ಟಿಕ್ ಟಾರ್ಪಲಿನ್ ಅಳವಡಿಸಿಕೊಂಡಿದ್ದರೂ ನೀರು ಸುರಿಯುವುದು ಮಾತ್ರ ನಿಂತಿಲ್ಲ.
ಸಿಬ್ಬಂದಿಗಳ ಮತ್ತು ಭಾಷೆ ಕೊರತೆ, ಗ್ರಾಹಕರು ತಳಮಳ :
ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿವರ್ಗದವರ ಕೊರತೆ ಒಂದು ಕಡೆ ಇನ್ನೊಂದು ಕಟೆಯಲ್ಲಿ ಮಾತೃಭಾಷೆ ಕನ್ನಡ ಮಾತನಾಡುವ ಸಿಬ್ಬಂದಿ ವರ್ಗದವರ ಕೊರತೆಯಿಂದಾಗಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿ, ಏನಾದರೂ ಕೇಳಿದರೆ ಮೂಖರಂತೆ ಕೈ, ಸನ್ನೆ ಮೂಲಕ ಪಕ್ಕದವರ ಕಡೆ ತೋರಿಸಿ ಕೈ ತೊಳೆದುಕೊಳ್ಳವ ಸಿಬ್ಬಂದಿವರ್ಗ ಇದರಿಂದ ಗ್ರಾಹಕರು ನಮಗೆ ಈ ಬ್ಯಾಂಕ್ ವ್ಯವಹಾರವೇ ಬೇಡ. ಖಾತೆ ಕ್ಲೋಸ್ ಮಾಡಿ ಬೇರೆ ಬ್ಯಾಂಕ್ಗೆ ಹೋಗುವುದೇ ಸೂಕ್ತ ಎನ್ನುವ ಹಂತಕ್ಕೆ ಬಂದಿದ್ದಾರೆ.

ಶಿಥಿಲ ಕಟ್ಟಡಕ್ಕೆ ಮುಕ್ತಿ ದೊರೆಯುವುದೇ ?
ಇಷ್ಟೆಲ್ಲಾ ಸಮಸ್ಯೆಗಳ ಆಗರವಾಗಿರುವ ರಿಪ್ಪನ್ಪೇಟೆ ಕೆನರಾ ಬ್ಯಾಂಕ್, ಶಿಥಿಲ ಕಟ್ಟಡದ ಬಗ್ಗೆ ಇನ್ನಾದರೂ ಮೇಲ್ಮಟದ ಅಧಿಕಾರಿಗಳು ಗಮನಹರಿಸಿ ಗ್ರಾಹಕರಿಗೆ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗಾಗುತ್ತಿರುವ ತೊಂದರೆಗೆ ಮುಕ್ತಿ ದೊರಕಿಸುವರೇ ಕಾದು ನೋಡಬೇಕಾಗಿದೆ.

