ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನೂಲಶ್ರಾವಣದಂದು (ಶ್ರವಣ ನಕ್ಷತ್ರ) ಮಂಗಲ ಆಶೀರ್ವಚನದಲ್ಲಿ ತಿಳಿಸಿದರು.

‘ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯ ಗುಣಗಳು ಜೈನಧರ್ಮದಲ್ಲಿ ರತ್ನತ್ರಯ ಎಂದು ಉಲ್ಲೇಖಿಸಲಾಗಿದ್ದು, ಬಾಲ್ಯದಿಂದಲೇ ರತ್ನತ್ರಯ ಸೂತ್ರಧಾರಣೆ ಮಾಡುವುದರಿಂದ ಪರಿವರ್ತನೆ, ಅಭಿವೃದ್ಧಿ, ಶಾಂತಿಯ ಸಂಕೇತವಾಗಿದೆ’ ಎಂದು ವಿವರಿಸಿದರು. ಊರ ಪರವೂರ ಭಕ್ತರಿಗೆ ರತ್ನತ್ರಯ (ಜನಿವಾರ) ನೀಡಿ, ಆಶೀರ್ವದಿಸಿದರು.
ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ, ಮಹಾಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿ-ವಿಧಾನದಲ್ಲಿ ಪೂಜೆಯನ್ನು ನೆರವೇರಿಸಲಾಯಿತು.
ಲೇಖನವನ್ನು ಮುಂದುವರಿಸಿ ಓದಿ

ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿ ವೃಂದದವರು ಹಾಗೂ ಊರ ಪರವೂರ ಭಕ್ತಸಮುದಾಯದವರು ರತ್ನತ್ರಯ ಧಾರಣೆಯ ಪೂರ್ವದಲ್ಲಿ ಣಮೋಕಾರ ಮಂತ್ರ ಪಠಿಸಿದರು.

ಶ್ರೀಕ್ಷೇತ್ರದ ಎಲ್ಲ ಜಿನಮಂದಿರಗಳಲ್ಲಿ ಪರಂಪರಾನುಗತ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಾರ್ಥಿಸಿದರು.

