ರಿಪ್ಪನ್ಪೇಟೆ : ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಅನ್ಯ ಭಾಷಿಗ ಅಧಿಕಾರಿಗಳಿಂದಾಗಿ ನಮ್ಮ ಮಾತೃ ಭಾಷೆ ಕನ್ನಡವನ್ನು ಕಡೆಗಣಿಸಿ ಗ್ರಾಹಕರನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸಿ ಕನ್ನಡ ಪರ ಸಂಘಟನೆಗಳು ಇಂದು ಬ್ಯಾಂಕ್ ಕಛೇರಿಯ ಎದುರು ಪ್ರತಿಭಟನೆ ನಡೆಸಿದರು.
ಕನ್ನಡ ಕಲಾಕೌಸ್ತುಭ ಕನ್ನಡ ಸಂಘ, ದೂನ ಮಲೆನಾಡು ಕನ್ನಡ ಸೇನೆ ಹಾಗೂ ವಿವಿಧ ಕನ್ನಡ ಪರ ಭಾಷಾಭಿಮಾನಿಗಳು ಮತ್ತು ಸಾರ್ವಜನಿಕರು ಬ್ಯಾಂಕ್ ಗ್ರಾಹಕರುಗಳ ಸಹಯೋಗದಲ್ಲಿ ಬ್ಯಾಂಕ್ ಅಧಿಕಾರಿಗಳ ಕನ್ನಡ ಭಾಷೆಯನ್ನು ಮಾತನಾಡದೆ ಬರಿ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಬ್ಯಾಂಕ್ಗೆ ಬರುವ ಗ್ರಾಹಕರನ್ನು ನಿತ್ಯ ಕಛೇರಿಗೆ ಅಲೆಯುವಂತೆ ಮಾಡಿದ್ದಾರೆ.

ಗ್ರಾಹಕರೇ ಬ್ಯಾಂಕ್ಗೆ ಜೀವಾಳ, ಆದರೆ ಬ್ಯಾಂಕ್ ಅಧಿಕಾರಿಗಳಿಗೆ ತಮಗೂ ಗ್ರಾಹಕರಿಗೂ ಯಾವುದೇ ಸಂಬಂಧವಿಲ್ಲದವರಂತೆ ನಟಿಸುತ್ತಿದ್ದು ರೈತಾಪಿ ಕೂಲಿ ಕಾರ್ಮಿಕರು ಹಾಗೂ ಅನಕ್ಷರಸ್ಥರು ಬ್ಯಾಂಕ್ ವ್ಯವಹಾರಕ್ಕೆ ಬಂದರೆ ಕೀಳು ಭಾವನೆಯಲ್ಲಿ ನೋಡುತ್ತಿದ್ದಾರೆಂದು ಪ್ರತಿಭಟನಾನಿರತರು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಕೆನರಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜು ಭೇಟಿ ನೀಡಿ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ಇನ್ನೂ 10 ದಿನದ ಒಳಗೆ ಸಮಸ್ಯೆ ಬಾರದಂತೆ ಪರಿಹರಿಸುವ ಭರವಸೆ ನೀಡಿ, ತಕ್ಷಣದಿಂದಲೇ ಗ್ರಾಹಕರಿಗೆ ತೊಂದರೆಯಾಗದಂತೆ ಮೂರು ನಗದು ಕೌಂಟರ್ಗಳನ್ನು ಹೊರಭಾಗದಲ್ಲಿ ಮಾಡುವಂತೆ ತಮ್ಮ ಬ್ಯಾಂಕ್ನ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ, ಡಿ.ಆರ್.ಚಿರಂತ್, ಮನೋಜ್, ದೂನ ಮಲೆನಾಡು ಕನ್ನಡ ಸೇನೆಯ ಸಿದ್ದೇಶ್ ಭಂಡಾರಿ, ಆದರ್ಶ, ಜಿ.ಡಿ.ಮಲ್ಲಿಕಾರ್ಜುನ, ನಂದೀಶ್, ಕಿರಣ್, ಜಿ.ಆರ್. ಗೋಪಾಲಕೃಷ್ಣ, ಚಿಗುರು ಶ್ರೀಧರ, ನಿರಂಜನ, ಕಗ್ಗಲಿ ಶಿವರಾಜ್ಪಾಟೀಲ್, ಶಿವಕುಮಾರ್, ಹಿರಿಯಣ್ಣ ಭಂಡಾರಿ, ನೂರಾರು ಸಾರ್ವಜನಿಕರು ಬ್ಯಾಂಕ್ ಗ್ರಾಹಕರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





