ಶಿವಮೊಗ್ಗ : ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಬೃಹತ್ ಬದಲಾವಣೆಯಾಗಿದ್ದು, ಹಲವು ಹೊಸ ರೈಲು ಸಂಪರ್ಕಗಳನ್ನು ಕಲ್ಪಿಸಲಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಹಾರನಹಳ್ಳಿ ಗ್ರಾಮದ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ₹1.88 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಸ್ತುತ 250 ಮೀಟರ್ ಅಗಲವಿರುವ ಪ್ಲಾಟ್ಫಾರ್ಮ್ ಅನ್ನು 1 ಮೀಟರ್ ಎತ್ತರಿಸಿ, 1 ಮೀಟರ್ ವಿಸ್ತರಿಸಲಾಗುತ್ತದೆ. ಈ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಹೆಚ್ಚು ರೈಲುಗಳು ನಿಂತು ಹೋಗಲು ಅನುಕೂಲವಾಗಲಿದೆ.

ನೂತನ ಮಾರ್ಗಗಳ ಸಂಪರ್ಕ:
ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದ್ದು, ಇದು ರಾಜ್ಯದ ಪ್ರಮುಖ 4 ಡಿಪೋಗಳಲ್ಲಿ ಒಂದಾಗಲಿದೆ. ಇದರಿಂದ ವಂದೇ ಭಾರತ್ ಸೇರಿದಂತೆ ತಿರುಪತಿ, ಎರ್ನಾಕುಲಂ (ಕೇರಳ), ಬಿಹಾರ, ಜಾರ್ಖಂಡ್, ಚಂಡೀಗಢ ಹಾಗೂ ಗುವಾಹಟಿಗೆ ನೇರ ರೈಲು ಸಂಪರ್ಕ ದೊರೆಯಲಿದೆ.
ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ಮಾರ್ಗ:
ಈ ಹೊಸ ಲೈನ್ ಆರಂಭವಾದರೆ ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಸುಲಭ ಮತ್ತು ಕಡಿಮೆ ವೆಚ್ಚದ ಪ್ರಯಾಣ ಸಾಧ್ಯವಾಗಲಿದೆ.
ಸ್ಥಳಾಂತರ ಮತ್ತು ಉನ್ನತೀಕರಣ:
ಪ್ರಸ್ತುತ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ನಡೆಯುತ್ತಿರುವ ರೈಲುಗಳ ನಿರ್ವಹಣೆ ಹಾಗೂ ಶಿವಮೊಗ್ಗ ನಗರದಲ್ಲಿರುವ ಗೂಡ್ಸ್ಶೆಡ್ ಶೀಘ್ರದಲ್ಲೇ ಕೋಟೆಗಂಗೂರಿಗೆ ಸ್ಥಳಾಂತರಗೊಳ್ಳಲಿವೆ.

ಸ್ಟೇಷನ್ಗಳ ನವೀಕರಣ:
ತಾಳಗುಪ್ಪ, ಸಾಗರ ಮತ್ತು ಶಿವಮೊಗ್ಗ ರೈಲು ನಿಲ್ದಾಣಗಳನ್ನು ₹100 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುವುದು. ಹಿಂದೆ ಬೆರಳಣಿಕೆಯಷ್ಟಿದ್ದ ರೈಲುಗಳ ಸಂಖ್ಯೆ ಇಂದು ದಿನಕ್ಕೆ 28ಕ್ಕೂ ಹೆಚ್ಚು ತಲುಪಿದೆ.
ಭವಿಷ್ಯದ ವಿಸ್ತರಣಾ ಯೋಜನೆಗಳು:
ರೈಲು ಸಂಪರ್ಕವಿಲ್ಲದ ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೂ ಮುಂಬರುವ ದಿನಗಳಲ್ಲಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ.
ಅಂತಿಮ ಸರ್ವೇ ಹಂತದಲ್ಲಿರುವ ಪ್ರಮುಖ ಮಾರ್ಗಗಳು:
- ಭದ್ರಾವತಿ – ಚಿಕ್ಕಜಾಜೂರು
- ಶಿವಮೊಗ್ಗ – ಶೃಂಗೇರಿ – ಮಂಗಳೂರು
- ಶಿವಮೊಗ್ಗ – ಬೀರೂರು ದ್ವಿಪಥ ರೈಲು ಮಾರ್ಗ (ಡಬ್ಲಿಂಗ್)
- ತಾಳಗುಪ್ಪ – ಶಿರಸಿ – ಹುಬ್ಬಳ್ಳಿ
- ತಾಳಗುಪ್ಪ – ಹೊನ್ನಾವರ ಹೊಸ ಲೈನ್
ಇನ್ನೂ, ಅಭಿವೃದ್ಧಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಶಿವಮೊಗ್ಗ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ₹28 ಕೋಟಿ ಅನುದಾನ ಮಂಜೂರು ಮಾಡುವಂತೆ ನೀರಾವರಿ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು. ಈ ಎಲ್ಲಾ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಬೆಂಬಲವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸಂಸದರ ಶ್ರಮದಿಂದ ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕನಾಯ್ಕ, ಕೆ.ಜಿ. ಕುಮಾರಸ್ವಾಮಿ, ಜಗದೀಶ್ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

