ಹೊಸನಗರ ; ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಇಸ್ಲಾಂ ಧರ್ಮದಲ್ಲಿ ನಂಬಿಕೆಯೊಂದಿಗೆ ಪರಿಪಾಲಿಸುತ್ತಿರುವವರ ಸಂಖ್ಯೆ ಜಗತ್ತಿನಾದ್ಯಂತ ಬಹಳಷ್ಟಿದ್ದು, ಮುಸ್ಲಿಂ ಧರ್ಮದವರಿಗೆ ರಂಜಾನ್ ಒಂದು ಪವಿತ್ರ ಆಚರಣೆಯಾಗಿದೆ.
ಈ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳ ಅವಧಿಯಲ್ಲಿ ಆರೋಗ್ಯ ಸ್ಥಿತಿಯಲ್ಲಿರುವ ಎಲ್ಲಾ ಮುಸ್ಲಿಮರು ಉಪವಾಸ ವೃತವನ್ನು ನಿರ್ವಹಿಸುವುದು ಒಂದು ಕಡ್ಡಾಯ ಸಂಪ್ರದಾಯವಾಗಿದ್ದು ಈ ಆಚರಣೆಯು ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳ ಪೈಕಿ ಒಂದಾಗಿದೆ ಎಂದು ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ಖತೀಬರಾದ ಜನಾಬ್ ಮೊಹಮ್ಮದ್ ಇಮಾಮುದ್ದೀನ್ ಸಾಖಿಮಿ ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಈದ್ ಉಲ್ ಫಿತ್ರ ವಿಶೇಷ ನಮಾಜ್ ನ್ನ ಖುತ್ಬಾ ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಮರಿಗೆ ಇದೊಂದು ತಿಂಗಳು ಪವಿತ್ರ ಅವಧಿಯಾಗಿದ್ದು ಪ್ರತಿಯೊಬ್ಬರೂ ತಮ್ಮ ದಿನದ ಉಪವಾಸವನ್ನು ಸೂರ್ಯೋದಯದಿಂದ ಆರಂಭಿಸಿ ಸೂರ್ಯಾಸ್ತದ ಸಮಯಕ್ಕೆ ಅಂತ್ಯಗೊಳಿಸುತ್ತೇವೆ, ತದನಂತರ ಪ್ರತಿ ದಿನ ತರಾವೀ ವಿಶೇಷ ನಮಾಜನ್ನು ನಿರ್ವಹಿಸಲಾಗುತ್ತದೆ, ರಂಜಾನ್ ತಿಂಗಳಲ್ಲಿ ನಮಾಜ್,ಉಪವಾಸದೊಂದಿಗೆ ಶ್ರೀಮಂತರು ತಮ್ಮ ಆಸ್ತಿಯ ಮೌಲ್ಯದ 2.5% ಅನ್ನು ಬಡವರಿಗೆ ಝಕಾತ್ ರೂಪದಲ್ಲಿ ನೀಡಬೇಕಾಗುತ್ತದೆ, ಅಲ್ಲದೆ ನಿರ್ಧಿಷ್ಟಪಡಿಸಿದ ಮೊತ್ತವನ್ನು ಫಿತ್ರಾ ರೂಪದಲ್ಲಿ ಕಡು ಬಡವರಿಗೆ ಪಾವತಿಸಿದ ನಂತರವಷ್ಟೇ ಈದ್ ನಮಾಜ್ ನಿರ್ವಹಿಸಬೇಕು ಎಂಬ ನಿಯಮವಿದೆ ಎಂದರು, ಜಮಾತಿನ ಬಾಂಧವರು ಬೆಳಿಗ್ಗೆ ಸಿಹಿ ತಿಂಡಿಯನ್ನು ಸ್ವೀಕರಿಸಿ ಮಸೀದಿಯಿಂದ ಕಾಲ್ನಡಿಗೆಯಲ್ಲಿ ಈದ್ಗಾಗೆ ಆಗಮಿಸಿದರು, ನಮಾಜ್ ನಂತರ ಇತ್ತಿಚೆಗೆ ನಿಧನರಾದ ಕಮಿಟಿಯ ನಿಕಟಪೂರ್ವ ಅಧ್ಯಕ್ಷರಾದ ಮರ್ಹೂಂ ಭಾಷಾ ಸಾಬ್ ರವರ ಸದ್ಗತಿಗೆ ದುವಾ ಮಾಡಲಾಯಿತು.

ಪಟ್ಟಣದ ಸಮೀಪದ ಎಡಚಿಟ್ಟೆ ವಾಸಿಗಳಾದ ವಿವೇಕ್ ಮತ್ತು ಸೌಮ್ಯ ದಂಪತಿಗಳ ಮಗು ಪೃಥ್ವಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಸಮುದಾಯದ ಬಾಂಧವರಿಂದ ಸಂಗ್ರಹವಾದ ದೇಣೆಗೆಯನ್ನು ಹಸ್ತಾಂತರಿಸಲಾಯಿತು.
ಕಮಿಟಿಯ ನೂತನ ಅಧ್ಯಕ್ಷರಾದ ಜನಾಬ್ ಜಿ.ಕೆ.ಅನ್ವರ್ ಭಾಷಾ, ಉಪಾಧ್ಯಕ್ಷರಾದ ಮೊಹಮ್ಮದ್ ಅಲಿ, ಕಾರ್ಯದರ್ಶಿ ಮೊಹಮ್ಮದ್ ರಫೀಕ್, ಖಜಾಂಚಿ ಇರ್ಷಾದ್ ತೋರೆಗದ್ದೆ, ಸದಸ್ಯರುಗಳು, ಸಮುದಾಯದ ಮುಖಂಡರಾದ ಭಾಷಾ ಸಾಬ್ ಟಿಎಂಸಿ, ಉಸ್ಮಾನ್ ಸಾಬ್, ಅಬ್ದುಲ್ ಹಮೀದ್, ಮಹಮ್ಮದ್ ಸಲೀಂ, ಜಾಫರ್ ಸಾಬ್, ರಝಾಕ್ ಸಾಬ್, ಮಹಮ್ಮದ್ ಶರೀಫ್, ಅಬು ಮೊಹಮ್ಮದ್ ಹುರ್ಲೆ, ಅಲಿ ಬಾಷಾ ಮುಂತಾದವರು ಹಾಜರಿದ್ದರು.
ವಿಶೇಷ ನಮಾಜ್ ನಂತರ ಪರಸ್ಪರ ಆಲಂಗಿಸಿಕೊಳ್ಳುವುದರೊಂದಿಗೆ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





