ಹೊಸನಗರ ; ಮಲೆನಾಡಿನ ಕುಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ಶೈಕ್ಷಣಿಕ ಸೇವೆಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಂದಿದೆ.
ಹೌದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಅವರು 2026-27ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರತ್ನಕುಮಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 48 ಶಿಕ್ಷಕರ ಪೈಕಿ ರತ್ನಕುಮಾರಿ ಎಸ್. ಅವರೂ ಒಬ್ಬರಾಗಿದ್ದಾರೆ. ಕರ್ನಾಟಕದಿಂದ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಶಿಕ್ಷಕಿ ಎಂಬ ಹೆಗ್ಗಳಿಕೆಯೂ ಅವರಿಗೆ ದೊರೆತಿದೆ.
ಸುಮಾರು ಮೂರು ದಶಕಗಳ ಬೋಧನಾ ಅನುಭವ ಹೊಂದಿರುವ ರತ್ನಕುಮಾರಿ ಅವರು ಕಳೆದ 24 ವರ್ಷಗಳಿಂದ ಸಮಟಗಾರು ಶಾಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಕಲಿಕೆಯನ್ನು ಸುಲಭ ಹಾಗೂ ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಪರಿಸರಾಧಾರಿತ ಪಾಠ, ಆಟದ ಮೂಲಕ ಕಲಿಕೆ ಮತ್ತು ವಿವಿಧ ಚಟುವಟಿಕೆಗಳನ್ನು ತರಗತಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯ ಬೆಳೆಸುವುದಕ್ಕೂ ವಿಶೇಷ ಆದ್ಯತೆ ನೀಡಿರುವ ಅವರು, ವಿದ್ಯಾರ್ಥಿ ಕೇಂದ್ರಿತ ಹಾಗೂ ಸೃಜನಶೀಲ ಬೋಧನಾ ವಿಧಾನಗಳ ಮೂಲಕ ಗಮನ ಸೆಳೆದಿದ್ದಾರೆ.

ರತ್ನಕುಮಾರಿ ಎಸ್. ಅವರ ದೀರ್ಘಕಾಲದ ಶೈಕ್ಷಣಿಕ ಸೇವೆ ಮತ್ತು ನವೀನ ಬೋಧನಾ ಪ್ರಯತ್ನಗಳಿಗೆ ದೊರೆತ ರಾಷ್ಟ್ರೀಯ ಮನ್ನಣೆ, ಸಮಟಗಾರು ಶಾಲೆ ಮಾತ್ರವಲ್ಲದೆ ಹೊಸನಗರ, ಶಿವಮೊಗ್ಗ ಹಾಗೂ ಇಡೀ ಮಲೆನಾಡಿನ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

