Ripponpete ಶಿವಮೊಗ್ಗ

ರಿಪ್ಪನ್‌ಪೇಟೆಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ಚುರುಕು ; ಇನ್ನೂ ತಪ್ಪಿಲ್ಲ ಟ್ರಾಫಿಕ್ ಸಮಸ್ಯೆ ಕಿರಿಕಿರಿ

ರಿಪ್ಪನ್‌ಪೇಟೆ ; ಇಲ್ಲಿನ ನಾಲ್ಕು ಜಿಲ್ಲಾ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ವಿನಾಯಕ ವೃತ್ತದ ತಲಾ ನಾಲ್ಕು ರಸ್ತೆಯಲ್ಲಿ 100 ಮೀಟರ್ ವಿಸ್ತರಣೆ ಮಾಡಿ ರಿಪ್ಪನ್‌ಪೇಟೆಯನ್ನು ಸಿಂಗಾಪುರ ಮಾದರಿ ಮಾಡುವ ಮಹಾದಾಸೆಯನ್ನು ಹೊಂದಿರುವ ಶಾಸಕ ಗೋಪಾಲಕೃಷ್ಣ ಬೇಳೂರರವರ ಆಸೆಯಂತೂ ಈಡೇರುವ ಹಂತದಲ್ಲಿ ಸಾಗಿದರೂ ಕೂಡಾ ರಾಜ್ಯ ಹೆದ್ದಾರಿಯ ವಿಸ್ತರಣೆಗೆ ತಮ್ಮ ಕಟ್ಟಡಗಳನ್ನು ತೆರವುಗೊಳಿಸದೆ ಅಭಿವೃದ್ದಿಗೆ ತಡೆಯಾಗಿದ್ದಾರೆ.

ಇನ್ನೂ ಹೆದ್ದಾರಿ ವಿಸ್ತರಣೆಯಾದರೂ ಕೂಡಾ ಇಲ್ಲಿನ ಟ್ರಾಫಿಕ್ ಸಮಸ್ಯೆ ಕಿರಿಕಿರಿಯಾಗಿಯೇ ಉಳಿಯುವ ಮೂಲಕ ಪೊಲೀಸ್ ಇಲಾಖೆಗೆ ಸಮಸ್ಯೆಯಾಗಿಯೇ ಉಳಿಯುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸುತ್ತಿರುವ ಸಾಗರ-ತೀರ್ಥಹಳ್ಳಿ ಶಿವಮೊಗ್ಗ-ಹೊಸನಗರ ರಸ್ತೆಯ ಮಧ್ಯ ರಸ್ತೆಯಿಂದ 16 ಮೀಟರ್ ಎರಡು ಕಡೆ ರಸ್ತೆಯ ವಿಸ್ತರಣೆ ಡಿವೈಡರ್ ಬಾಕ್ಸ್ ಡ್ರೈನೇಜ್ ನಿರ್ಮಾಣದ ಕಾಮಗಾರಿಗಳು ಮುಗಿದಿದೆ.

ಆದರೆ ವಿದ್ಯುತ್ ಲೈನ್ ಹಾಗೂ ಪಾದಚಾರಿಗಳ ಸಂಚಾರಕ್ಕಾಗಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಲೋಕೋಪಯೋಗಿ ಇಲಾಖೆಯ ಮತ್ತು ಗುತ್ತಿಗೆದಾರ ಜೊತೆ ಪ್ರತಿಯೊಂದು ಅಂಗಡಿಯ ಮುಂದೆ ನಿಂತು ಜಾಗ ಗುರುತು ಮಾಡಿ ಪ್ರತಿಯೊಂದು ಅಂಗಡಿಯವರು ಸಹಕಾರ ನೀಡಿ ಅಂಗಡಿಯ ಮುಂದೆ 6 ಅಡಿ ಜಾಗ ತೆರವು ಮಾಡಿಕೊಡುವಂತೆ ಖಡಕ್ ಸೂಚನೆ ನೀಡಿ ಗ್ರಾಮ ಪಂಚಾಯಿತ್ ಧ್ವನಿವರ್ಧಕದ ಮೂಲಕ ನಿತ್ಯ ಪ್ರಚಾರ ಮಾಡಲಾಗುತ್ತಿದ್ದರೂ ಕೂಡಾ ಯಾವುದನ್ನು ಲೆಕ್ಕಿಸದೇ ತೆರವು ಮಾಡದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ಅಸಮಾಧಾನಕ್ಕೆ ಎಡೆಮಾಡಿದಂತಾಗಿದೆ.

ವಿಶಾಲ ರಸ್ತೆ, ವಾಹನಗಳ ಸುಗಮ ಸಂಚಾರ, ಪಾದಚಾರಿ ಮಾರ್ಗ, ವ್ಯವಸ್ಥಿತ ಬಸ್ ನಿಲ್ದಾಣ ವಿದ್ಯುತ್ ದೀಪಗಳನ್ನು ಆಳವಡಿಸುವ ಮೂಲಕ ಪಟ್ಟಣವನ್ನು ರಾಜ್ಯದಲ್ಲಿಯೇ ಮಾದರಿ ಪಟ್ಟಣವನ್ನಾಗಿಸುವ ಕನಸು ಇದೆ.
ರಾಜ್ಯ ಹೆದ್ದಾರಿಯ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ರಸ್ತೆಗೆ ಹೊಂದಿಕೊಂಡಿರುವ ಅಂಗಡಿ ಮುಂಗಟ್ಟು ಮನೆ ಕಾಂಪೌಂಡ್‌ಗಳನ್ನು ಸ್ವತಃ ತೆರವುಗೊಳಿಸಿಕೊಡುವಂತೆ ಮೈಕ್ ಮೂಲಕ ಮನವಿ ಮಾಡಲಾದರು ಕೆಲವರು ತೆರವುಗೊಳಿಸಿದರೆ ಇನ್ನೂ ಕೆಲವರು ತೆರವುಗೊಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಕಳೆದ ವರ್ಷ ಸಾಗರ ರಸ್ತೆಯ ಗಣೇಶ್ ಮೆಟಲ್ ಸ್ಟೋರ‍್ಸ್ ಮಾಲೀಕ ಎಸ್.ಚಂದ್ರಪ್ಪ ಎಂಬುವರ ಅಂಗಡಿಯನ್ನು ತಹಸೀಲ್ದಾರ್ ರಶ್ಮಿ ಹಾಲೇಶ್ ಮುಂದೆ ನಿಂತು ತೆರವುಗೊಳಿಸಿ ಅರ್ಥ ಕಟ್ಟಡ ಪಾಳು ಬಿದ್ದಿದೆ. ಅವರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಎಂಬಂತೆ ಇಲ್ಲಿನ ರಾಜಕೀಯ ನಾಯಕರು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ.

ಇಂದಿನ ತಹಸೀಲ್ದಾರ್ ಮತ್ತು ಪಂಚಾಯಿತ್ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತ್ ಅಭಿವೃದ್ದಿ ಅಧಿಕಾರಿಗಳು ಮುಂದೆ ನಿಂತು ಅಭಿವೃದ್ದಿಗೆ ಅಡ್ಡಿಯಾಗಿರುವ ಕಟ್ಟಡಗಳನ್ನು ತೆರವುಗೊಳಿಸುವತ್ತ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇದರೊಂದಿಗೆ ಇಲ್ಲಿನ ನಾಲ್ಕು ಜಿಲ್ಲಾ, ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿನ ವಿನಾಯಕ ವೃತ್ತದಿಂದ ನಾಲ್ಕು ರಸ್ತೆ ವಿಸ್ತರಣೆ ಮತ್ತು ಒಳಚರಂಡಿ, ವಿದ್ಯುತ್ ಕಂಬಗಳ ಸ್ಥಳಾಂತರ ಸಾಗರ ತೀರ್ಥಹಳ್ಳಿ ರಸ್ತೆಯಲ್ಲಿ ಪಾದಚಾರಿಗಳಿಗೆ ಫುಟ್ ಪಾತ್‌ಗೆ ಇಂಟರ್ ಲಾಕ್ ಕಾಮಗಾರಿ ಪೂರ್ಣಗೊಂಡಿದ್ದರೆ ಶಿವಮೊಗ್ಗ-ಹೊಸನಗರ ರಸ್ತೆಯ ಪಾದಚಾರಿಗಳ ರಸ್ತೆಗೆ ಇಂಟರ್ ಲಾಕ್ ಅಳವಡಿಕೆ ಮಾತ್ರ ಉಳಿದಿದೆ. ಆದರೆ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆಂಬ ಉದ್ದೇಶದಿಂದ 11 ಕೆ.ವಿ.ವಿದ್ಯುತ್ ಲೈನ್ ಹಾದುಹೋಗಿರುವ ಕಂಬದಿಂದ 6 ಅಡಿ ಜಾಗ ಬಿಡಬೇಕು ಎಂದರೂ ಕೂಡಾ 11 ಕೆ.ವಿ.ವಿದ್ಯುತ್ ಲೈನ್ ಕಂಬಕ್ಕೆ ತಾಗಿದಂತೆ ಕಟ್ಟಡ ಇದ್ದರೂ ತೆರವು ಮಾಡದಿರುವುದು ಸಾರ್ವಜನಿಕವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಏನಾದರೂ ಅವಘಡಗಳು ಸಂಭವಿಸಿದರೆ ಇಲಾಖೆಯವರು ಪರಿಹಾರ ನೀಡಲು ಬರುವುದಿಲ್ಲವೆಂದು ಹೇಳಲಾದರೂ ಯಾವುದನ್ನು ಲೆಕ್ಕಿಸದೇ ಇವರೇ ಕಾನೂನು ಮಾಡಿದವರಂತೆ ನಡೆದುಕೊಳ್ಳುತ್ತಿದ್ದಾರೆನ್ನಲಾಗಿದೆ.

ಈಗಲಾದರೂ ಶಾಸಕ ಗೋಪಾಲಕೃಷ್ಣ ಬೇಳೂರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಮೂಲಕ ಎಲ್ಲರಿಗೂ ಒಂದೇ ನಿಯಮದಡಿ ಕಟ್ಟಡ ತೆರವು ಕಾರ್ಯಕ್ಕೆ ಮುಂದಾಗಬೇಕು.
– ರವೀಂದ್ರ ಕೆರೆಹಳ್ಳಿ, ಕಾಂಗ್ರೆಸ್ ಮುಖಂಡ

ಬಹುವರ್ಷಗಳ ಬೇಡಿಕೆಯಂತೆ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರವರ ಮಹಾದಾಸೆಯಂತೆ ರಸ್ತೆ ವಿಸ್ತರಣೆಯೊಂದಿಗೆ ಅಭಿವೃದ್ದಿ ಕಾಮಗಾರಿ ಪೂರ್ಣ ಹಂತ ತಲುಪಿದ್ದು ಕೆಲವರು ಕಟ್ಟಡ ತೆರವು ಮಾಡದೇ ಇರುವುದರಿಂದ ವಾಹನ ನಿಲುಗಡೆ ಮಾಡುವುದು ಸಮಸ್ಯೆಯಾಗಿದೆ.
– ರಾಜುಗೌಡ, ಬಿಲ್ಲೇಶ್ವರ ಶೆಟ್ಟಿಬೈಲು

ವಿನಾಯಕ ವೃತ್ತದ ನಾಲ್ಕು ಪ್ರಮುಖ ರಾಜ್ಯ ಹೆದ್ದಾರಿ ಹಾದು ಹೋಗುವ ರಸ್ತೆಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಹಂಪ್ಸ್ ನಿರ್ಮಿಸಲಾಗುತ್ತಿದ್ದು ಇದರಿಂದ ಅಪಘಾತವನ್ನು ತಡೆಯಲು ಸಾಧ್ಯ.
– ಉಮೇಶ ಹೆಚ್.ಎನ್., ರಿಪ್ಪನ್‌ಪೇಟೆ

Leave a Comment