ಶಿವಮೊಗ್ಗ: ಮಲೆನಾಡು ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಮತ್ತೊಂದು ಅನುಕೂಲ ಸಿಗಲಿದೆ. ಶಿವಮೊಗ್ಗದಿಂದ ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಮತ್ತು ಗುಂತಕಲ್ ಮಾರ್ಗಗಳಲ್ಲಿ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆ ಹಾಗೂ ನೈಋತ್ಯ ರೈಲ್ವೆಯ ಸಮನ್ವಯದಲ್ಲಿ, “ಬೇಡಿಕೆಯ ಮೇರೆಗೆ ರೈಲು” ಯೋಜನೆಯಡಿ ಈ ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಹಬ್ಬದ ಋತು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಯಾತ್ರಾರ್ಥಿಗಳ ಪ್ರಯಾಣದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ಓಡಿಸಲಾಗುತ್ತಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದೆ. ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಮಚಿಲಿಪಟ್ಟಣಂ–ಶಿವಮೊಗ್ಗ ವಿಶೇಷ ರೈಲು
ರೈಲು ಸಂಖ್ಯೆ 07217 ಆಗಸ್ಟ್ 30ರಂದು ಮಚಿಲಿಪಟ್ಟಣಂನಿಂದ ಮಧ್ಯಾಹ್ನ 3:55ಕ್ಕೆ ಹೊರಟು, ಆಗಸ್ಟ್ 31ರಂದು ಮಧ್ಯಾಹ್ನ 3:00ಕ್ಕೆ ಶಿವಮೊಗ್ಗ ತಲುಪಲಿದೆ.
ರೈಲು ಸಂಖ್ಯೆ 07218 ಸೆಪ್ಟೆಂಬರ್ 2ರಂದು ಶಿವಮೊಗ್ಗದಿಂದ ಸಂಜೆ 5:40ಕ್ಕೆ ಹೊರಟು, ಸೆಪ್ಟೆಂಬರ್ 3ರಂದು ಮಧ್ಯಾಹ್ನ 3:55ಕ್ಕೆ ಮಚಿಲಿಪಟ್ಟಣಂ ತಲುಪಲಿದೆ.
ಶಿವಮೊಗ್ಗ–ಗುಂತಕಲ್ ವಿಶೇಷ ರೈಲು
ರೈಲು ಸಂಖ್ಯೆ 07219 ಆಗಸ್ಟ್ 31ರಂದು ಶಿವಮೊಗ್ಗದಿಂದ ಸಂಜೆ 5:40ಕ್ಕೆ ಹೊರಟು, ಸೆಪ್ಟೆಂಬರ್ 1ರಂದು ಬೆಳಿಗ್ಗೆ 7:00ಕ್ಕೆ ಗುಂತಕಲ್ ತಲುಪಲಿದೆ.
ರೈಲು ಸಂಖ್ಯೆ 07220 ಸೆಪ್ಟೆಂಬರ್ 2ರಂದು ಗುಂತಕಲ್ನಿಂದ ರಾತ್ರಿ 1:45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 3:00ಕ್ಕೆ ಶಿವಮೊಗ್ಗ ತಲುಪಲಿದೆ.
ಈ ಸೇವೆಯಿಂದ ಆಂಧ್ರ ಪ್ರದೇಶಕ್ಕೆ ತೆರಳುವ ಶಿವಮೊಗ್ಗ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಈ ರೈಲುಗಳನ್ನು ನಿಯಮಿತ ಸೇವೆಯಾಗಿ ಪರಿಗಣಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ರೈಲುಗಳ ವೇಳಾಪಟ್ಟಿ ಮತ್ತು ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯ ಐಸಿಎಂಎಸ್ ಹಾಗೂ ಎನ್ಟಿಇಎಸ್ ವ್ಯವಸ್ಥೆಯಲ್ಲಿ ಲಭ್ಯವಿದೆ.

