ಶಿವಮೊಗ್ಗ:ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ವ್ಯಕ್ತಿಯೊಬ್ಬ ಅನಾರೋಗ್ಯದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಮನ್ಸೂರ್ (43), ಟಿಪ್ಪುನಗರ ನಿವಾಸಿ ಎಂದು ಗುರುತಿಸಲಾಗಿದೆ.
ಮೂರು ದಿನಗಳಲ್ಲಿ ಜೈಲಿನಿಂದ ಆಸ್ಪತ್ರೆ, ಬಳಿಕ ಮರಣ
ಮನ್ಸೂರ್ ಸೆಪ್ಟೆಂಬರ್ 15ರಂದು ವಿಚಾರಣಾಧೀನ ಕೈದಿಯಾಗಿ ಶಿವಮೊಗ್ಗ ಜೈಲಿಗೆ ಸೇರಿದ್ದ. ಆದರೆ ಸೆಪ್ಟೆಂಬರ್ 17ರ ಮಧ್ಯರಾತ್ರಿ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಕಾರಾಗೃಹ ಅಧಿಕಾರಿಗಳು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 18ರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ಕಾರಾಗೃಹ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಂಧನ
ಸೆಪ್ಟೆಂಬರ್ 14ರಂದು ಮನ್ಸೂರ್ ತನ್ನ ತಂದೆಯೊಂದಿಗೆ ಮನೆಯ ಆಸ್ತಿ ಹಕ್ಕು ಸಂಬಂಧಿತ ವಿಷಯವಾಗಿ ಜಗಳವಾಡಿದ್ದ. ಈ ವೇಳೆ ಕತ್ತರಿಯಿಂದ ತಂದೆಯ ಎದೆ ಹಾಗೂ ಕುತ್ತಿಗೆ ಸೇರಿ ಹಲವು ಭಾಗಗಳಲ್ಲಿ ಚುಚ್ಚಿ ಮಾರಣಾಂತಿಕವಾಗಿ ಗಾಯಪಡಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಅವರನ್ನು ಬಂಧಿಸಿ ಸೆಪ್ಟೆಂಬರ್ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣಾಧೀನ ಕೈದಿಯಾಗಿ ಶಿವಮೊಗ್ಗ ಜೈಲಿಗೆ ರವಾನಿಸಿದ್ದರು. ಆದರೆ ಕೇವಲ ಮೂರು ದಿನಗಳಲ್ಲೇ ಅವರ ಆರೋಗ್ಯ ಹದಗೆಟ್ಟು ಸಾವಿಗೆ ದಾರಿ ಮಾಡಿಕೊಟ್ಟಿದೆ.
ಈ ಕುರಿತು ಕಾರಾಗೃಹ ಅಧಿಕಾರಿಗಳು ಅಗತ್ಯ ವರದಿ ಸಲ್ಲಿಸಿದ್ದು, ಪ್ರಕರಣವನ್ನು ಕಾನೂನು ಪ್ರಕ್ರಿಯೆ ಅನುಸಾರ ಮುಂದಿನ ತನಿಖೆಗೆ ಒಳಪಡಿಸಲಾಗಿದೆ.

