ಸುಪ್ರಿಂಕೋರ್ಟ್ ಆದೇಶ ಉಲ್ಲಂಘನೆ ; ಪರಿಸರ ನಾಶದ ಆರೋಪ, ಮದ್ಯದಂಗಡಿ ಪರವಾನಗಿ ನವೀಕರಿಸದಂತೆ ಗ್ರಾಮಸ್ಥರ ಮನವಿ
ಹೊಸನಗರ : ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರು, ಸಿಗಂದೂರಿಗೆ ಕೊಂಡಿಯಂತಿರುವ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿಯ ಶ್ರೀದೇವಿ ವೈನ್ಸ್ ಅಂಗಡಿ ಮಾಲೀಕರು ಅಂಗಡಿಯ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಎಸೆಯುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಂಡ ಕಂಡಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಪೌಚುಗಳು, ಪ್ಲಾಸ್ಟಿಕ್ ಕವರ್ಗಳನ್ನು ಎಸೆಯಲಾಗಿದ್ದು, ಅಕ್ಕ ಪಕ್ಕದ ಕೃಷಿ ಭೂಮಿಯ ಕೃಷಿಚಟುವಟಿಕೆ ಕೈಗೊಳ್ಳಲು ಇದರಿಂದ ಕಷ್ಟಸಾಧ್ಯವಾಗಿದೆ. ಈ ಅಂಗಡಿ ರಾಷ್ಟ್ರೀಯ ಹೆದ್ದಾರಿ 766-ಸಿ ಇಂದ ಕೇವಲ 150 ಅಡಿಗಳಷ್ಟು ದೂರವೇ ಇದೆ.
ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಅಬಕಾರಿ ಮದ್ಯದಂಗಡಿ ರಾಷ್ಟ್ರೀಯ ಹೆದ್ದಾರಿಯಿಂದ ಕನಿಷ್ಟ 220 ಅಡಿ ದೂರವಿರಬೇಕು ಎಂಬ ಸ್ಪಷ್ಟ ಕಾಯ್ದೆ ಇದ್ದರೂ, ಅಂಗಡಿ ಮಾಲೀಕರು ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೂಡಲೇ ಅಬಕಾರಿ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ತನಿಖೆ ನಡೆಸಬೇಕು ಹಾಗೂ ಪ್ರಸಕ್ತ ವರ್ಷ ಈ ಅಂಗಡಿ ಲೈಸೆನ್ಸ್ ನವೀಕರಣಗೊಳಿಸದಂತೆ ತಡೆಹಿಡಿಯಬೇಕೆಂದು ಗ್ರಾಮಸ್ಥರ ಪರವಾಗಿ ನಿಟ್ಟೂರು ವಾಸಿ ರವೀಶ್ ಎನ್.ಎಸ್. ಜಿಲ್ಲಾಡಳಿತವನ್ನು ಕೋರಿದ್ದಾರೆ.