ಮದ್ಯ ಕುಡಿದ ಹಣ ಕೇಳಿದಕ್ಕೆ ಕೋಡೂರು ಬಾರ್’ನಲ್ಲಿ ಮಾರಾಮಾರಿ !

ರಿಪ್ಪನ್‌ಪೇಟೆ : ಬಾರ್ ಒಂದರಲ್ಲಿ ಮದ್ಯ ಸೇವಿಸಿದವರಿಗೆ ಬಿಲ್ ಪಾವತಿಸುವಂತೆ ಸೂಚಿಸಿದ ಕ್ಯಾಶಿಯರ್ ಗೆ ಅವಾಚ್ಯವಾಗಿ ನಿಂದಿಸಿ, ಬಾಟಲಿಯಿಂದ ತಲೆಗೆ ಹೊಡೆದಿರುವ ಘಟನೆ ವರದಿಯಾಗಿದೆ.
ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಘಟನೆ ಸಂಭವಿಸಿದೆ. ಬಾರ್ ಗೆ ಬಂದಿದ್ದ ಮೂವರು ಮದ್ಯ ಸೇವಿಸಿದ್ದಾರೆ. ಹಣ ಪಾವತಿ ಮಾಡುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮದ್ಯದ ಬಾಟಲಿಗಳನ್ನು ಒಡೆದು, ಬಾಗಿಲಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ 40 ಸಾವಿರ ರೂ. ನಷ್ಟವಾಗಿದೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ವಿವರ :

ತೀರ್ಥಹಳ್ಳಿಯ ದೇವರಾಜ್ ಎಂಬುವವರು ಕಳೆದ 3 ವರ್ಷದಿಂದ ಕೋಡೂರು ಗ್ರಾಮದ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರಿ ಬಾರ್‌ ಮತ್ತು ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಫೆ. 02 ರಂದು ದೇವರಾಜ್ ರಾತ್ರಿ 8-00 ಗಂಟೆಯ ಸಮಯದಲಿ, ಕ್ಯಾಷ್ ಕೌಂಟರ್ ನಲಿದ್ದಾಗ ರಿಪ್ಪನ್‌ಪೇಟೆ ಸಮೀಪದ ಬಿಳಕಿ ಗ್ರಾಮದ ವಾಸಿಗಳಾದ ಕ್ರಾಂತಿ ಮತ್ತು ಸುದರ್ಶನ ಹಾಗೂ ಕೋಡೂರಿನ ಕೃಷ್ಣ ಎಂಬುವವರು ಬಂದು ಬಾರ್ ನಲಿ ಮದ್ಯಪಾನ ಮಾಡಿದ್ದು, ಮದ್ಯಪಾನ ಮಾಡಿದ ಕೊಡಬೇಕಾದ ಹಣದ ಕ್ಯಾಷ್ ಬಿಲ್ ನ್ನು ಸಪ್ಲೈಯರ್ ಷಣ್ಮುಖವಿನೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ದೇವರಾಜ್ ಕೊಟ್ಟ ಕ್ಯಾಷ್ ಬಿಲ್ಲನ್ನು ಸಪ್ಲೈಯರ್ ಷಣ್ಮುಖನು ತೆಗೆದುಕೊಂಡು ಕ್ರಾಂತಿ ಸುದರ್ಶನ ಮತ್ತು ಕೋಡೂರಿನ ಕೃಷ್ಣ ಇವರು ಕುಳಿತಿದ್ದ ಟೇಬಲ್ ಹತ್ತಿರ ಹೋಗಿ ಅವರಿಗೆ ಕೋಡಲು ಹೋದಾಗ ಕ್ರಾಂತಿ ಮತ್ತು ಸುದರ್ಶನ ಇವರು ಕ್ಯಾಷ್ ಬಿಲ್ ಕೊಡುವುದಿಲ್ಲ, ನಾವು ಯಾರೂ ಎಂದು ಗೊತ್ತಿಲ್ಲ ನೋ ಎಂದು ಏರು ಧ್ವನಿಯಲ್ಲಿ ಕೂಗಾಡುತ್ತಾ ದೇವರಾಜ್ ಇದ್ದ ಕ್ಯಾಷ್ ಕೌಂಟರ್ ಹತ್ತಿರ ಬಂದಿದ್ದು, ಆಗ ಕ್ರಾಂತಿಯು ದೇವರಾಜ್ ಗೆ ಏ ಬೋ… ಮಗನೇ ನಿನ್ನ ಅ…ನ್ನು ನಮಗೆ ಬಿಲ್ ಕೇಳುತ್ತೀಯಾ ನಾವು ಯಾರು ಅಂತ ಗೊತ್ತಿಲ್ಲವೇನೋ ಹ.. ಸೂ…ಮಗನೇ ಎಂದು ಅವಾಚ್ಯವಾಗಿ ಬೈಯ್ದು ದೇವರಾಜ್ ಬೈಯಬೇಡ ಎಂದು ಹೇಳುತ್ತಿದ್ದಂತೆ ಕ್ರಾಂತಿ ದೇವರಾಜ್ ಗೆ ಕೈಯಿಂದ ಹೊಡೆದಿದ್ದು, ಅದಕ್ಕೆ ದೇವರಾಜ್ ಗಲಾಟೆ ಮಾಡಬೇಡಿ ಉಳಿದ ಗ್ರಾಹಕರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದು ಆದರೂ ಕೇಳದೆ ಹೊಡೆಯಲು ಬಂದಿದ್ದು ದೇವರಾಜ್ ಕ್ಯಾಷ್ ಕೌಂಟರ್ ನಲ್ಲಿ, ಹಿಂದಕ್ಕೆ ಸರಿದುಕೊಂಡಾಗ ಕ್ರಾಂತಿ ಮತ್ತು ಸುದರ್ಶನ ಕ್ರಾಪ್‌ ಕೌಂಟರ್ ಬಾಗಿಲನ್ನು ಮುರಿದು ಒಳಗೆ ಬಂದಿದ್ದು ಕ್ರಾಂತಿ ಅಲ್ಲೆ ಇದ್ದ ಒಂದು ಬಿಯರ್ ಬಾಟಲಿಯನ್ನು ತೆಗೆದುಕೊಂಡು ದೇವರಾಜ್ ತಲೆಯ ಮೇಲೆ ಹೊಡೆಯಲು ಬಂದಾಗ ದೇವರಾಜ್ ನ್ನು ಬಿಡಿಸಿಕೊಳ್ಳಲು ಸಪ್ಲೈಯರ್ ಕೆಲಸದ ಷಣ್ಮುಖ ಬಂದಾಗ ಸುದರ್ಶನ ಎಂಬುವವನು ಷಣ್ಮುಖನಿಗೆ ತಳ್ಳಿಕೊಂಡು ಬಾರ್ ನ ಹಾಲ್ ನಲ್ಲಿ ಎಳೆದುಕೊಂಡು ಹೋಗಿ ಏ ಬೋ..ಮಗನೇ ನಿನಗೆ ಸಾಯಿಸಿಯೇ ಬಿಡುತ್ತೇನೆಂದು ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ತಲೆಗೆ ಬಲವಾಗಿ ಹೊಡೆದು ಸಾಯಿಸುವ ಉದ್ದೇಶದಿಂದಲೇ ಹೊಡೆದಿದ್ದಾನೆ. ನಂತರ ಕ್ರಾಂತಿಯು ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ನಮಗೆ ಬಿಲ್ ಕೇಳುತ್ತಿಯಾ ನಿನಗೆ ಇದೆ ಬಿಯರ್ ಬಾಟಲಿಯಿಂದ ಹೊಡೆದು ಸಾಯಿಸುತ್ತೇನೆಂದು ಸಾಯಿಸುವ ಉದ್ದೇಶದಿಂದ ದೇವರಾಜ್ ತಲೆಯ ಮೇಲೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ.
ದೇವರಾಜ್ ತಲೆಗೆ ತೀವ್ರ ಗಾಯವಾಗಿ ಅಲ್ಲೆ ಕೆಳಗೆ ಬಿದ್ದಿದ್ದು, ಆಗ ಕ್ರಾಂತಿ ದೇವರಾಜ್ ಹೊಟ್ಟೆ ಬೆನ್ನು ಎದೆಗೆ ಕಾಲಿನಿಂದ ಒದ್ದಿದ್ದು ಸುದರ್ಶನ ಮತ್ತು ಕ್ರಾಂತಿ ಇವರು ಅಂಗಡಿಯಲಿದ್ದ ಬಿಯರ್ ಬಾಟಲಿಗಳನ್ನು ಹಾಗೂ ಇತರೆ ಬಾಟಲಿಗಳನ್ನು ಸಹಾ ಒಡೆದು, ಬಾಗಿಲನ್ನು ಮುರಿದು ಹಾಕಿದ್ದಾರೆ. ಅವರೊಂದಿಗೆ ಬಂದಿದ್ದ ಕೋಡೂರು ಕೃಷ್ಣನು ಕ್ಯಾಷ್ ಕೌಂಟರ್ ಹತ್ತಿರ ಬಂದು ಅಲ್ಲೆ ನಿಂತುಕೊಂಡಿದ್ದನು.

ಬಾರ್ ನಲ್ಲಿದ್ದ ಮದ್ಯದ ಬಾಟಲಿಗಳನ್ನ ಬಾಗಿಲನ್ನು ಮುರಿದಿದ್ದರಿಂದ ಸುಮಾರು 40 ಸಾವಿರ ರೂ. ಗಳಷ್ಟು ನಷ್ಟ ಮಾಡಿದ್ದಾರೆ. ನಂತರ ಮೂಲಗಿರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಆದರ್ಶ ಮತ್ತು ಸಂತೋಷ್ ಎಂಬುವವರು ಬಂದು ನನಗೆ ಮತ್ತು ಷಣ್ಮುಖನಿಗೆ ಬಿಡಿಸಿಕೊಂಡರು, ನಂತರ ಕ್ರಾಂತಿ ಮತ್ತು ಸುದರ್ಶನ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋದರು. ನಂತರ ನನಗೆ ಮತ್ತು ಷಣ್ಮುಖನಿಗೆ ತಲೆಗೆ ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ಆದರ್ಶ ಮತ್ತು ಸಂತೋಷ ಸೇರಿ ಖಾಸಗಿ ವಾಹನದಲ್ಲಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ 108ರ ಅಂಬುಲೆನ್ಸ್ ವಾಹನದಲಿ, ಬಾರ್ ಮಾಲೀಕರಾದ ಗಿರೀಶ್ ರವರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದೇವೆ ಎಂದು ಗಾಯಾಳು ದೇವರಾಜ್ ರಿಪ್ಪನ್‌ಪೇಟೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!