ಮಹಿಳಾ ದೌರ್ಜನ್ಯ ಸಂದರ್ಭದಲ್ಲಿ ಸಹಾಯವಾಣಿ ಸೌಲಭ್ಯ ಪಡೆಯಿರಿ ; ಪ್ರೇಮಾ ಶಾಂತರಾಜ್
ಹೊಸನಗರ: ಮಹಿಳೆಯರಿಗೆ ಶೋಷಣೆ ಆಗುವುದನ್ನು ತಪ್ಪಿಸಲು ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆತಂದಿದೆ. ಅಗತ್ಯ ಬಿದ್ದಾಗ ಅವುಗಳನ್ನು ಬಳಸಿಕೊಳ್ಳಲು ಮಹಿಳೆಯರು ಹಿಂದೇಟು ಹಾಕಬಾರದು ಎಂದು ಆಪ್ತ ಸಮಾಲೋಚಕಿ ಪ್ರೇಮಾ ಶಾಂತರಾಜ್ ಹೇಳಿದರು.
ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ ಮಹಿಳಾ ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಮಹಿಳಾ ಸಾಂತ್ವನ ಕೇಂದ್ರ, ಸಹಾಯವಾಣಿಗಳು ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತವೆ. ಮಹಿಳೆಯರಿಗೆ ದೌರ್ಜನ್ಯವಾದಲ್ಲಿ ಪ್ರಜ್ಞಾವಂತ ಪ್ರಜೆಗಳು ಸಂಬಂಧಪಟ್ಟ ಇಲಾಖೆ ಅಥವಾ ಸಹಾಯವಾಣಿಗೆ ಸಂಪರ್ಕಿಸಬಹುದು. ಯಾವುದೇ ಸಮಸ್ಯೆಎದುರಾಗಿ ಮಹಿಳೆ ಸಾಂತ್ವನ ಕೇಂದ್ರಕ್ಕೆ ಬಂದಾಗ ತಾತ್ಕಾಲಿಕ ಆಶ್ರಯ ಅಥವಾ ಚಿಕಿತ್ಸೆ ನೀಡಲಾಗುವುದು. ಕಾನೂನು ಸಂಘರ್ಷದ ಸಂದರ್ಭದಲ್ಲಿ ಕಾನೂನು ನೆರವು ಸಹಾ ಉಚಿತವಾಗಿ ಲಭ್ಯವಿದೆ ಎಂದು ಅವರು ತಿಳಿಸಿದರು.
ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ವನಮಾಲ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಲಾ ಶ್ರೀಧರ್, ಸದಸ್ಯರಾದ ಭಾನುಮತಿ, ಕೃಷ್ಣಮೂರ್ತಿ, ಪ್ರಮುಖರಾದ ಸೌಮ್ಯ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.