ಸ್ನೇಹಿತನ ಮಗನ ಅಪಹರಿಸಿ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿಗೆ ಶಿಕ್ಷೆ ಪ್ರಕಟ !
ಶಿವಮೊಗ್ಗ : ಹಳೆ ದ್ವೇಷದ ಹಿನ್ನೆಲೆಯಲ್ಲಿ ಚುರ್ಚಿಗುಂಡಿಯ ಬಸವರಾಜಪ್ಪ ಎಂಬುವವರು ತನ್ನ ಸ್ನೇಹಿತನಾದ ಆಲ್ಕೊಳ ಗ್ರಾಮದ ಲಿಂಗರಾಜು ಎಂಬುವವರ 8 ವರ್ಷದ ಪುತ್ರ ಪ್ರೇಮ್ ಕುಮಾರ್ ನನ್ನು ಅಪಹರಿಸಿ ನಂತರ ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಗ್ರಾಮದ ಬಳಿಯ ಕುಮದ್ವತಿ ನದಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈದ ಘಟನೆ 2017ರ ಮಾರ್ಚ್ 2 ರಂದು ನಡೆದಿತ್ತು.
ಘಟನೆ ಸಂಬಂಧ ವಿನೋಬನಗರ ಪೊಲೀಸರು ಆರೋಪಿ ಬಸವರಾಜಪ್ಪನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿ ಬಸವರಾಜಪ್ಪರಿಗೆ ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ವಾದಿಸಿದ್ದರು.