ರಿಪ್ಪನ್ಪೇಟೆ ; ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ.
ಪತ್ತೆಯಾದ ಶಾಸನ ವಿಜಯನಗರ ಸಾಮರಾಜ್ಯದ ಸಂಗಮ ವಂಶದ ಆಳ್ವಿಕೆ ಕಾಲದ್ದು ಎನ್ನಲಾಗಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ದಾಖಲೆ ಲಭೀಸಿದೆ. ದಾನ ಪತ್ರದಲ್ಲಿ ಕಲೂರ ನಾಡು ಎಂದು ಕಲ್ಲೂರು ಗ್ರಾಮದ ಉಲ್ಲೇಖವಿದೆ.
ಸಂಶೋಧಕ ಆದಿತ್ಯ ನಂಜವಳ್ಳಿ, ಗಣೇಶ ಕೆ.ಎನ್., ಪತ್ರಕರ್ತ ಎನ್.ಕಾರ್ತಿಕ್ ಕೌಂಡಿನ್ಯ ಅವರು ಶಾಸನ ಪತ್ತೆ ಹಚ್ಚಿ ಅಧ್ಯಯನ ನಡೆಸಿದ್ದಾರೆ.
ಈ ಭಾಗದ ಐತಿಹಾಸಿಕ ಹಿನ್ನಲೆಗೆ ಪುಷ್ಟಿ :
ಕ್ರಿ.ಶಕ 1424 (ಶಕ ವರ್ಷ1346)ರಲ್ಲಿ ಮೂರನೇ ಬುಕ್ಕರಾಯನ ಮಗನಾದ ಎರಡನೇ ದೇವರಾಯನು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟದಲ್ಲಿ ಆರಗದ ನಾಡಿನ ವ್ಯಾಪ್ತಿಗೆ ಸೇರಿದ ಕಲೂರು ನಾಡನ್ನು ಹಂಪಿಯ ಪ್ರಸಿದ್ದ ವಿರೂಪಾಕ್ಷ ದೇವರಿಗೆ ಅಮೃತ ಪಡಿ (ನೈವೇದ್ಯ) ಸೇವೆಗಾಗಿ ಧಾರೆಯೆರೆದು ಕೊಟ್ಟಿರುವುದಾಗಿ ಶಾಶನದಲ್ಲಿ ಉಲ್ಲೇಖವಿದೆ. ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನ ನೀಡುವ ಪರಂಪರೆ ಮಹತ್ವ ಪಡೆದಿತ್ತು ಎಂಬುದು ಸ್ಪಷ್ಟವಾಗಿದೆ.

ವಿಜಯನಗರದ ಅರಸರಾದ ಮೂರನೇ ಬುಕ್ಕರಾಯನನ್ನು ಮಹಾರಾಜಾಧಿರಾಜ, ರಾಜಪರಮೇಶ್ವರ ಶ್ರೀವೀರಪ್ರತಾಪ ವಿಜಯಬುಕ್ಕರಾಯ ಎಂದು ಹಾಗೂ ಎರಡನೇ ದೇವರಾಯನನ್ನು ವೀರಪ್ರತಾಪ ದೇವರಾಯ ಮಹಾರಾಯ ಎಂದು ಕೊಂಡಾಡಲಾಗಿದೆ. ಈ ಬಿರುದುಗಳು ಆ ಕಾಲದ ರಾಜಕೀಯ ವೈಭವ ತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತವೆ.
ಈ ಶಾಸನದಲ್ಲಿ ಕಲೂರನಾಡಿನ ಗಡಿಭಾಗಗಳಾಗಿ ಸುತ್ತಮುತ್ತಲಿನ ಒಡರಸುಳಿ (ವಡಾಹೊಸಳ್ಳಿ), ಬಿದರಹಳ್ಳಿ, ತಳಲ(ತಳಲೆ), ಕಣಬಂದೂರು, ಕರಡಿಗ ಮತ್ತು ಕಕರಿಯ ಗ್ರಾಮಗಳ ಉಲ್ಲೇಖವಿದೆ. ಇದರಿಂದ ಆ ಕಾಲದ ಭೌಗೋಳಿಕ ವ್ಯಾಪ್ತಿ ಮತ್ತು ಆಡಳಿತದ ಅಮೂಲ್ಯ ಮಾಹಿತಿಗಳು ಲಭ್ಯವಾಗಿವೆ.
ಶಾಸನ ಪತ್ತೆಯು ವಿಜಯನಗರ ಕಾಲದ ವೈಭವದ ಧಾರ್ಮಿಕ ದಾನ ಸಂಪ್ರದಾಯ ಗ್ರಾಮೀಣ ಆಡಳಿತ ಮತ್ತು ಈ ಭಾಗದ ಸ್ಥಳೀಯ ಇತಿಹಾಸದ ಮೇಲೆ ಪುರಾತತ್ವದ ಮಹತ್ವ ಸ್ಪಷ್ಟಪಡಿಸಿದೆ.

ಈ ಸಂದರ್ಭದಲ್ಲಿ ಬಸವಣ್ಣ ದೇವಸ್ಥಾನದ ಅಧ್ಯಕ್ಷ ವೈ.ಟಿ.ನಾಗರಾಜ್, ಗೌರವಾಧ್ಯಕ್ಷ ಏಲಕ್ಕಿಕೊಪ್ಪ ವೀರಭದ್ರಪ್ಪಗೌಡ, ಗಿರಿರಾಜ್ಗೌಡ, ಮಂಜುನಾಥ, ಆದರ್ಶ ಕಲ್ಲೂರು, ಶಿವಣ್ಣ, ಚಂದ್ರಹಾಸ್, ಮಲ್ಲಿಕಾರ್ಜುನ, ದಾನಪ್ಪ, ಆದರ್ಶ ಮೂಗುಡ್ತಿ ಇನ್ನಿತರರಿದ್ದರು.
“ವಿಜಯನಗರ ಸಾಮ್ರಾಜ್ಯದ ಅಧೀನ ರಾಜ್ಯವಾಗಿ ಆರಗನಾಡು (ಇಂದಿನ ಆರಗ) ಅಸ್ತಿತ್ವಕ್ಕೆ ಬಂದಿದೆ. ಸ್ಥಳೀಯ ಗ್ರಾಮಗಳ ಗಡಿಗಳ ಮಾಹಿತಿ ಇಲ್ಲಿ ಲಭ್ಯವಾಗಿದೆ. ಗ್ರಾಮಗಳ ವಿಸ್ತೀರ್ಣದ ಮಾಹಿತಿಗೆ ಪೂರಕ ದಾಖಲೆಯಾಗಿದೆ.”
– ಆದಿತ್ಯ ನಂಜವಳ್ಳಿ, ಇತಿಹಾಸ ಸಂಶೋಧಕ
“ನಮ್ಮ ಗ್ರಾಮದ ಬಸವಣ್ಣ ದೇವಸ್ಥಾನ ಜೀರ್ಣೋದ್ದಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ವಿಜಯನಗರ ಕಾಲದ ಶಾಸನ ಪತ್ತೆಯಿಂದ ಕಲ್ಲೂರು ಐತಿಹಾಸಿಕವಾಗಿ ಅಚ್ಚಳಿಯದೆ ಉಳಿಯಲಿದೆ.”
– ಏಲಕ್ಕಿಕೊಪ್ಪ ವೀರಭದ್ರಪ್ಪಗೌಡ, ಗ್ರಾಮದ ಹಿರಿಯರು

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





