ತೀರ್ಥಹಳ್ಳಿ ; ಡಿ. 27 ರಂದು ಬೆಳಿಗ್ಗೆ ಸುಮಾರು 09.00 ರಿಂದ ಮಧ್ಯಾಹ್ನ 02.00 ಗಂಟೆಯ ಅವಧಿಯಲ್ಲಿ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು ಗ್ರಾಮದ ಕೌರಿಹಕ್ಲು ನಿವಾಸಿ ಜೀವನ್ ಕೆ.ಆರ್ ಎಂಬುವರ ಮನೆಯ ಹಿಂಬಾಗಿಲನ್ನು ಮುರಿದು ಮನೆಯಲ್ಲಿದ್ದ ಸುಮಾರು 20 ಗ್ರಾಂನ ಅಂದಾಜು 2.40 ಲಕ್ಷ ರೂ. ಮೌಲ್ಯದ ಬಂಗಾರದ ವಸ್ತುಗಳನ್ನು ಕಳ್ಳತನವಾಗಿದ್ದು ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿ ಹೊಸನಗರ ತಾಲೂಕು ಅರಸಾಳು ಗ್ರಾ.ಪಂ. ವ್ಯಾಪ್ತಿಯ ಬಸವಾಪುರ ಗ್ರಾಮದ ಅಶೋಕ್ (41) ಈತನನ್ನು ಬಂಧಿಸಿ 2.40 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ 35 ಸಾವಿರ ರೂ. ಮೌಲ್ಯದ ಕೆಎ15 ಇ6521 ನೊಂದಣಿಯ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ಬಂಧನ ಕಾರ್ಯಾಚರಣೆಯಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಚ್ಚಿ ಮಾರ್ಗದರ್ಶನದಲ್ಲಿ, ಮಾಳೂರು ವೃತ್ತದ ಸಿಪಿಐ ರಾಜಶೇಖರ್ ಎಲ್, ಆಗುಂಬೆ ಠಾಣೆಯ ಪಿಎಸ್ಐ ಶಿವನಗೌಡ ಹಾಗೂ ಸಿಬ್ಬಂದಿಗಳಾದ ದಿವಾಕರ್, ಸುರೇಶ್ ನಾಯ್ಕ, ಸುರಕ್ಷಿತ್, ವಿನಯ್ ಕುಮಾರ್, ಸುಭಾಷ್ ಹಾಗೂ ಚಾಲಕರಾದ ಅವಿನಾಶ್ ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿತ್ತು.
ಆರೋಪಿ ಅಶೋಕ್ ಕಳೆದ ವರ್ಷವಷ್ಟೇ ಮನೆಗಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬೇಲ್ ಮೂಲಕ ಹೊರಬಂದಿದ್ದ.

