ಶಿವಮೊಗ್ಗ: ಮಂಗಳವಾರದಂದು ಬೆಳಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿನ (ಗಾಡಿ ಸಂಖ್ಯೆ 20652) ಮಾರ್ಗಮಧ್ಯೆ ಅರಸಾಳು ಸಮೀಪ ರೈಲ್ವೆ ಹಳಿಯ ಮೇಲೆ ಆನೆಯೊಂದು ಮರವನ್ನು ಉರುಳಿಸಿದ್ದರಿಂದ ರೈಲು ಸಂಚಾರದಲ್ಲಿ ದಿಢೀರ್ ವ್ಯತ್ಯಯ ಉಂಟಾಗಿತ್ತು.
ಸಾಲು ಸಾಲು ಹಬ್ಬಗಳ ರಜೆಯನ್ನು ಮುಗಿಸಿಕೊಂಡು ತಮ್ಮ ಕೆಲಸ-ಕಾರ್ಯಗಳಿಗಾಗಿ ರಾಜಧಾನಿಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರಿಗೆ ಈ ಅನಿರೀಕ್ಷಿತ ಘಟನೆಯಿಂದ ತೊಂದರೆಯಾಗಿದೆ. ಬೆಳಗಿನಜಾವ 5.20ರ ಸುಮಾರಿಗೆ ತಾಳಗುಪ್ಪದಿಂದ ಪ್ರಯಾಣ ಬೆಳೆಸಿದ್ದ ಈ ರೈಲು, ನಿಗದಿಯಂತೆ ಬೆಳಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತಲುಪಬೇಕಾಗಿತ್ತು.

ಆದರೆ, ಅರಸಾಳು ಬಳಿ ಮರ ಬಿದ್ದಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ರೈಲನ್ನು ಆನೆಕೆರೆ ಹಾಗೂ ನೆವಟೂರು ಗ್ರಾಮಗಳ ಮಧ್ಯೆಯೇ ಸುರಕ್ಷಿತವಾಗಿ ನಿಲ್ಲಿಸಲಾಯಿತು. ಇದರಿಂದಾಗಿ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ರೈಲು ಒಂದೇ ಕಡೆ ನಿಲ್ಲುವಂತಾಗಿದ್ದು, ಪ್ರಯಾಣಿಕರು ತೀವ್ರ ಹೈರಾಣಾದರು.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ, ಹಳಿಯ ಮೇಲಿರುವ ಮರವನ್ನು ತೆರವುಗೊಳಿದ್ದಾರೆ. ಟ್ರ್ಯಾಕ್ ಸಂಪೂರ್ಣವಾಗಿ ತೆರವಾದ ಕೂಡಲೇ ರೈಲು ಸಂಚಾರ ಎಂದಿನಂತೆ ಮುಂದುವರಿಯಿತು.

