ರಿಪ್ಪನ್ಪೇಟೆ : ‘ಅತಿಶಯ ಶ್ರೀಕ್ಷೇತ್ರ ಹೊಂಬುಜದ ಜಿನಮಂದಿರಗಳ ದರ್ಶನ, ಪೂಜೆ ಸಮರ್ಪಣೆಯು ಧಾರ್ಮಿಕ ಪರಂಪರೆಯ ದ್ಯೋತಕವಾಗಿದೆ. ಪ್ರಾಚೀನ ಇತಿಹಾಸ ಹೊಂದಿರುವ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಅನುಗ್ರಹ ಪ್ರಾಪ್ತಿಗಾಗಿ ಭಕ್ತರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಧರ್ಮ-ತತ್ವಗಳ ಪರಿಪಾಲನೆಯಿಂದ ಶಾರೀರಿಕ-ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುವುದೆಂಬ ದೃಢ ನಂಬಿಕೆ ಉಳ್ಳವರಾಗಿದ್ದಾರೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ತಮ್ಮ ಅನುಗ್ರಹ ಪ್ರವಚನದಲ್ಲಿ ತಿಳಿಸಿದರು.

ಚತುರ್ಥ ಶ್ರಾವಣ ಸಂಪತ್ ಶುಕ್ರವಾರದ ಸುದಿನದಂದು ಊರ ಪರವೂರ ಭಕ್ತರು ಉಡಿ-ಹರಕೆ-ಕಾಣಿಕೆ-ಪೂಜೆ ಸಲ್ಲಿಸಿದರು. ಭಕ್ತರಿಗೆ ಶ್ರೀಗಳವರು ಶುಭಾಶೀರ್ವಾದ ಮಾಡಿ, ‘ಜೀವನದಲ್ಲಿ ಸಾತ್ವಿಕ ಆಹಾರ ಸೇವನೆ, ಯೋಗ, ವ್ಯಾಯಾಮ, ಧ್ಯಾನ, ಸ್ವಾದ್ಯಾಯ ನಿರಂತರ ಮಾಡುವ ಮರ್ಮವನ್ನು ತಿಳಿಸಿ, ಇಷ್ಟಾರ್ಥಗಳು ನೆರವೇರಲಿ. 79ನೇ ಸ್ವಾತಂತ್ರ್ಯ ದಿನಾಚರಣೆಯಿಂದ ದೇಶವು ಪ್ರಗತಿ ಪಥದಲ್ಲಿ ಸಾಗಲು ಶ್ರಮಿಸೋಣ’ ಎಂದು ಸಂದೇಶವಿತ್ತರು.

ಸಿರಿಧಾನ್ಯ, ನವಧಾನ್ಯ, ಸವಿ ನೈವೇದ್ಯಗಳನ್ನು ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅರ್ಪಿಸಲಾಯಿತು. ಪ್ರಾತಃಕಾಲ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಜಿನಾಗಮೋಕ್ತ ವಿಧಿ-ವಿಧಾನಗಳ ಮೂಲಕ ಪೂಜೆಗಳು ನೆರವೇರಿದವು.



