ರಿಪ್ಪನ್ಪೇಟೆ : ಅರಸಾಳು ವಲಯ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ 60 ಸಾವಿರ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗುವುದೆಂದು ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಕೆ.ಬಿ.ತಿಳಿಸಿದರು.
ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಸಿರು ನಮ್ಮ ಉಸಿರು, ಅದನ್ನು ಕಾಪಾಡಬೇಕಾದ ಹೊಣೆ ನಮ್ಮೆಲ್ಲರದ್ದು. ಮನೆಯ ಸುತ್ತಮುತ್ತ ಮರ-ಗಿಡಗಳನ್ನು ಬೆಳೆಸುವುದರೊಂದಿಗೆ ಪರಿಶುದ್ಧ ಗಾಳಿಯನ್ನು ಪಡೆಯಲು ಹಾಗು ಸ್ವಚ್ಚತೆಯಿಂದ ಪರಿಸರ ರಕ್ಷಣೆ ಮಾಡುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೆ ಶುದ್ದ ಆಮ್ಲಜನಕಯುಕ್ತ ಗಾಳಿ ಪಡೆಯಲು ಸಾಧ್ಯವಾಗುವುದೆಂದರು.
ನಮ್ಮ ವಲಯ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಇಲ್ಲ. ಅಲ್ಲದೆ ಕಾಡಿನ ಸುತ್ತ ಮುಳ್ಳಿನ ತಂತಿಯ ತಡೆ ಬೇಲಿ ಹಾಗೂ ಟ್ರಂಚ್ ಹೊಡೆಯಲಾಗಿದ್ದು ಯಾರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡದಂತಾಗಿದೆ. ಇನ್ನೂ ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದ್ದು ಬೆಂಕಿಯಿಂದ ಅರಣ್ಯ ನಾಶ ಸಹ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಸುನೀಲ್ ಹಾಗೂ ಕಛೇರಿ ಸಿಬ್ಬಂದಿವರ್ಗ ಹಾಜರಿದ್ದರು.

