ರಿಪ್ಪನ್ಪೇಟೆ ; “ಪರ್ಯೂಷಣ ಪರ್ವದ ಉತ್ತಮ ಸಂಯಮ ಧರ್ಮದ ವ್ರತಾಚರಣೆಯು ಸಮಾಜದಲ್ಲಿ, ಕುಟುಂಬದಲ್ಲಿ ವಾತ್ಸಲ್ಯವನ್ನು ರೂಢಿಸುತ್ತದೆ. ಎಲ್ಲರೊಂದಿಗೂ, ಪ್ರಕೃತಿಯ ಗಿಡಮರಗಳಲ್ಲಿಯೂ ಮಮತಾ ಭಾವದಿಂದ ಇರುವುದರಿಂದ ಭಾವ ಹಿಂಸೆಯನ್ನು ಮಾಡದಂತೆ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ” ಎಂದು ಹೊಂಬುಜ ಅತಿಶಯ ಶ್ರೀ ಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪ್ರವಚನದಲ್ಲಿ ತಿಳಿಸಿದರು.
‘ವಾತ್ಸಲ್ಯಮಯಿ ಮನೋಭಾವವು ಕೋಪ-ತಾಪಗಳನ್ನು ನಿವಾರಿಸಬಲ್ಲುದೆಂದು’ ಹೇಳಿದರು.
ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಜಿನಾಗಮೋಕ್ತ ವಿಧಿ-ವಿಧಾನದಲ್ಲಿ ಪೂಜಾ ಕೈಂಕರ್ಯವನ್ನು ಸ್ವಸ್ತಿಶ್ರೀಗಳವರ ನೇತೃತ್ವ, ಉಪಸ್ಥಿತಿ, ಸಾನಿಧ್ಯದಲ್ಲಿ ನೆರವೇರಿಸಲಾಯಿತು.

ಊರ ಪರವೂರ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಸಮಾಜ, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಪೂಜೆಯ ಸಂದರ್ಭದಲ್ಲಿ ಜಿನಸ್ತುತಿ ಸ್ತುತಿಸಿದರು. ಪದ್ಮರಾಜ ಇಂದ್ರ ಹಾಗೂ ಸಹಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

