ರಿಪ್ಪನ್ಪೇಟೆ : ಧರ್ಮ ದ್ರೋಹಿಗಳಾದರೆ ಮಾತ್ರ ಪಾಪ ಬರುತ್ತದೆ. ತಾಯಿ-ತಂದೆ, ಅಣ್ಣ-ತಂಗಿ, ಅಕ್ಕ-ತಮ್ಮ, ಲೌಕಿಕ ಸಂಬಂಧ ಯಾವುದು ನಮ್ಮ ಜೊತೆ ಬರುವುದಿಲ್ಲ. ನಾವು ಅರಿಷಡ್ ವರ್ಗಗಳ ಪಾಲನೆಯಿಂದ ಧರ್ಮ ಸಂಸ್ಕಾರವಂತರಾಗಬೇಕು ಎಂದು ಬೀರೂರು ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಉಡೇವು ಬೃಹನ್ಮಠದಲ್ಲಿ ಲಿಂ.ಶಿವಲಿಂಗೇಶ್ವರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಮನಸ್ಥಿತಿಯ ಮಲೀನತೆಯನ್ನು ತೊಡೆದು ಹಾಕಿ ಮನಸ್ಸಿನ ಪರಿವರ್ತನೆ ಮಾಡಿಕೊಳ್ಳುವ ಮೂಲಕ ನಮ್ಮ ಧರ್ಮ ಸಂಸ್ಕಾರವನ್ನು ಪರಿಪಾಲಿಸಿದಾಗ ಮಾತ್ರ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು.
ಕೋಣಂದೂರು ಉಡೇವು ಬೃಹನ್ಮಠದಲ್ಲಿ ಲಿಂ.ಶಿವಲಿಂಗೇಶ್ವರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಎಂಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಬಿಲ್ಲೇಶ್ವರದ ಕು. ಐಶ್ವರ್ಯ ಇವರನ್ನು ಸಮಾಜದ ವತಿಯಿಂದ ಗುರುಗಳ ಸಮ್ಮುಖದಲ್ಲಿ ಶ್ರೀಗಳು ಗುರುರಕ್ಷೆ ನೀಡಿ ಸನ್ಮಾನಿಸಿದರು.
ಮಠದ ಶಾಸ್ತ್ರಿಗಳು ವೇದಘೋಷ ಮಾಡಿದರು. ಶಶಿಕಲಾ ಮಲ್ಲಪ್ಪ ಪ್ರಾರ್ಥಿಸಿದರು. ಜೆ.ಎಂ.ಶಾಂತಕುಮಾರ್ ಸ್ವಾಗತಿಸಿದರು. ರಾಜೇಂದ್ರಗೌಡ ಆವಿನಹಳ್ಳಿ ವಂದಿಸಿದರು.

