ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದಲ್ಲಿ ದನಕಳ್ಳತನ ಮಾಡಿದ್ದ ಶಿವಮೊಗ್ಗದ ಟಿಪ್ಪುನಗರ ನಿವಾಸಿಗಳೆನ್ನಲಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ರಿಡ್ಜ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಜನವರಿ 25ರಂದು ಬೆಳಗಿನ ಜಾವ, ಕಟ್ಟೆಹಕ್ಕಲು ಗ್ರಾಮದ ನಿವಾಸಿ ತುಂಬ್ರಿಮನೆ ದೇವರಾಜ ಎಂ.ಎಸ್. ಅವರಿಗೆ ಸೇರಿದ ಹಸುವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.
ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಸಿ.ಎಚ್.ಸಿ. ಲಿಂಗೇಗೌಡ, ಕುಮಾರ್, ವಿಜಯ್, ಸಿಪಿಸಿ ವೀರೇಂದ್ರ, ಪ್ರಸಾದ್, ದೀಪಕ್, ಮಂಜುನಾಥ ಹಂಪಿಹೊಳಿ, ಮಂಜುನಾಥ ದೋಣಿಕಲ್, ಮೋಹನ ಹಾಗೂ ವಿಜಯ ಕುಮಾರ್ ಅವರನ್ನು ಒಳಗೊಂಡ ತಂಡವು ವಿಶೇಷ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.
ಲೇಖನವನ್ನು ಮುಂದುವರಿಸಿ ಓದಿ
ಬಂಧಿತರನ್ನು ಮುಬಾರಕ್ (25) – ಶಿವಮೊಗ್ಗ ಆರ್ಎಂಎಲ್ ನಗರ, ಅಹ್ಮದ್ ಬೇಗ್ (25) ಹಾಗೂ ಮುಕ್ರಮವುಲ್ಲಾ (21) – ಟಿಪ್ಪುನಗರ, ಶಿವಮೊಗ್ಗ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು ₹2 ಲಕ್ಷ ಮೌಲ್ಯದ ರಿಡ್ಜ್ ಕಾರನ್ನು ಪೊಲೀಸರು ಅಮಾನತುಗೊಳಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಅಭಿನಂದಿಸಿದ್ದಾರೆ.

