ಹೊಸನಗರ ; ಸಾಗರ ವಿಭಾಗದ ಹೊಸನಗರ ತಾಲೂಕಿನ ನಗರ ವಲಯ ಅರಣ್ಯದಲ್ಲಿ ಜ.8ರ ಬೆಳಗಿನಜಾವ 3 ಗಂಟೆಯ ಸುಮಾರಿಗೆ ಸಂಪೆಕಟ್ಟೆ ಶಾಖೆ ಹೊಸೂರು ಗ್ರಾಮದ ಸರ್ವೆ ನಂಬರ್ 4 ಮತ್ತಿಕೈ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 4 ರಿಂದ 5 ವರ್ಷದ ಒಂದು ಕಾಡೆಮ್ಮೆಯನ್ನು ಅಕ್ರಮ ಬೇಟೆಯಾಡಿ ಕಾಲು ಹಾಗೂ ತಲೆಯನ್ನು ಸ್ಥಳದಲ್ಲೇ ಬಿಟ್ಟು, ಮಾಂಸವನ್ನು ಸಾಗಾಣಿಕೆ ಮಾಡಿರುವ ಸಂಬಂಧ ಖಚಿತ ಮಾಹಿತಿ ದೊರೆತು ವನ್ಯಜೀವಿ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಆರೋಪಿಗಳು ನಾಪತ್ತೆಯಾಗಿದ್ದರು.
ಸಾಗರ ಡಿಎಫ್ ಓ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಹೊಸನಗರ ಎಸಿಎಫ್ ಕೆ.ಬಿ. ಮೋಹನ್ ಕುಮಾರ್, ನಗರ ಆರ್ ಎಫ್ ಒ ಸಂತೋಷ್ ಮಲ್ಲನಗೌಡ್ರು, ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಹಾಗು ಸಿಬ್ಬಂದಿಗಳು ಸೂಕ್ತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಉ.ಕ. ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ವಾಸಿ ಮಹಮ್ಮದ್ ಅಶ್ರಫ್, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಹಣಬರಕೇರಿ ವಾಸಿ ಆಲಿಬಾಪು ಯಾಸೀನ್ ಹಾಗೂ ಬೈಂದೂರು ತಾಲೂಕು ಶಿರೂರು ಗ್ರಾಮದ ಮದ್ದೋಡಿ ರೋಡ್ ಜೋಗೂರ್ ಕ್ರಾಸ್ ವಾಸಿ ವಾಸಿಂಅಕ್ರಂ ನನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರೂ ಆರೋಪಿಗಳ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ನಗರ ವಲಯ ಉಪ ಅರಣ್ಯಾಧಿಕಾರಿ ಸತೀಶ್ , ಟಿ.ಪಿ.ನರೇಂದ್ರ ಕುಮಾರ್, ಅಮೃತ್ ಸುಂಕದ್, ರಾಘವೇಂದ್ರ ತೆಗ್ಗಿದ್, ರಾಜೇಂದ್ರ ಜಿ.ಡಿ, ಹಾಗು ಗಸ್ತು ಅರಣ್ಯ ಪಾಲಕರಾದ ಮನೋಜ್ ಕುಮಾರ್ ಕನೇರಿ, ಯೋಗರಾಜ್, ಎ.ವಿ.ಮನೋಜ್, ಸುಬ್ಬಣ್ಣ ಸತೀಶ್, ದಿವಾಕರ್, ಚಾಲಕ ರಾಮುಗಾಣಿಗ ಸಿಬ್ಬಂದಿಗಳು ಹಾಜರಿದ್ದರು.