ರಿಪ್ಪನ್ಪೇಟೆ ; ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಯಾಳಿಗೆ ಹಾವು ಕಚ್ಚಿದ್ದು, ಇನ್ನೂ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಗಾಯಾಳು ಮತ್ತು ಶಾಲೆಯ ವಿದ್ಯಾರ್ಥಿನಿಯೋರ್ವ ಪರೀಕ್ಷೆ ಕುಳಿತ ವೇಳೆ ತೀವ್ರ ಅಸ್ವಸ್ತಗೊಂಡಿದ್ದು ಸಕಾಲದಲ್ಲಿ 108 ವಾಹನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಪ್ರಥಮ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ತಕ್ಷಣ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗ ಶಿಫಾರಸ್ಸು ಮಾಡಿದರೆ ಇಲ್ಲಿ ತುರ್ತು ಸೇವೆಗೈಯುವ 108 ರ ವಾಹನವಿಲ್ಲದೆ ಹಾವು ಕಡಿತದ ರೋಗಿ ಮತ್ತು ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಪರದಾಡುವಂತಾಗಿದ್ದು ಅಲ್ಲದೆ ಪರೀಕ್ಷೆಯ ವೇಳೆ ತೀವ್ರ ಅಸ್ವಸ್ತಗೊಂಡ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಹರಸಾಹಸ ಪಡುವಂತಾಗಿದೆ ಎಂದು ಕೆರೆಹಳ್ಳಿ ಮುರುಳಿಧರ ಮತ್ತು ರವೀಂದ್ರ, ಬಸವರಾಜ ಬೆನವಳ್ಳಿ, ಭೀಮರಾಜ್ ಕರಡಿಗಾ, ಶ್ರೀಧರ ತೀವ್ರ ಕಳವಳ ವ್ಯಕ್ತಪಡಿಸಿ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ ತೋಟದಲ್ಲಿ ಮಣ್ಣು ಕೆಲಸ ಮಾಡುತ್ತಿದ್ದ ಬಯಲು ಸೀಮೆಯ ಕೂಲಿಯಾಳು ನೀರು ಕುಡಿಯಲು ತೋಟದಲ್ಲಿನ ಹೊಂಡದ ಬಳಿ ಹೋಗುತ್ತಿದ್ದಾಗ ಹಾವು ಆಕಸ್ಮಿಕವಾಗಿ ಕಡಿದಿದ್ದು ಇದರಿಂದ ತಕ್ಷಣ ಇಲ್ಲಿನ ಅಸ್ಪತ್ರೆಗೆ ಚಿಕಿತ್ಸೆಗಾಗಿ 108 ತುರ್ತು ಸೇವೆಗೆ ಫೋನ್ ಮಾಡಿ ನಾಲ್ಕೈದು ಗಂಟೆ ಕಳೆದರೂ ವಾಹನ ಬಾರದಿರುವುದರ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮದಾನಕ್ಕೆ ಕಾರಣವಾಯಿತು.
ಇನ್ನೂ ರಸ್ತೆ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಶ್ರಾವವಾಗುತ್ತಿದ್ದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲು ಸಹ ತುರ್ತು ವಾಹನಕ್ಕೆ ಕರೆ ಮಾಡಿದರೂ ಕೂಡಾ ವಾಹನ ಬಾರದಿರುವುದು ಸಹ ಗಾಯಾಳು ಕಡೆಯವರ ಆಕ್ರೋಶಕ್ಕೆ ಎಡೆ ಮಾಡಿತು.
ಸ್ಟಾಫ್ ನರ್ಸ್ ಇಲ್ಲದೆ ಪರದಾಟ ;
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಕಾರ್ಯಕರ್ತೆ ಇಲ್ಲದೆ ಬೇರೆ ಬೇರೆ ಕಡೆ ಗ್ರಾಮಗಳಲ್ಲಿನ ಎ.ಎನ್.ಎಂ. ಗಳನ್ನು ನಿಯೋಜನೆ ಮಾಡಿಕೊಳ್ಳುತ್ತಿದ್ದು ಇದರಿಂದಾಗಿ ಬಂದಂತಹ ಎ.ಎನ್.ಎಂ.ಗಳು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮಾತ್ರೆ, ಔಷಧಿ, ಚುಚ್ಚುಮದ್ದು ನೀಡಲು ತಡಕಾಡುವಂತಾಗಿದ್ದಾರೆ.
ಸಾರ್ವಜನಿಕರ ಫೋನ್ ಕರೆ ಸ್ವೀಕರಿಸದ ಡಿ.ಹೆಚ್.ಓ ಮತ್ತು ಸಿ.ಇ.ಓ ;
ಸಾಕಷ್ಟು ಸಮಯ ಕಳೆದ ನಂತರ ರೋಗಿಗಳ ಆಕ್ರೋಶದಿಂದಾಗಿ ಸ್ಥಳದಲ್ಲಿದ ಕೆಲವರು ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಮತ್ತು ಜಿಲ್ಲಾ ಪಂಚಾಯಿತ್
ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳನ್ನು ಸಂಪರ್ಕಿಸಲು ಮುಂದಾದರೆ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿ ಸರ್ಕಾರ ಕೊಟ್ಟಿರುವ ಫೋನ್ ಸಮಸ್ಯೆಯ ಪರಿಹಾರಕ್ಕೋ ಅಥವಾ ಕುಟುಂಬ ವ್ಯವಹಾರಕ್ಕೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುವಂತಾಗಿರುವುದಕ್ಕೆ ಸಾಕ್ಷಿಯಾಗಿದೆ.