ಹೊಸನಗರ : ಕಳೆದ 45 ವರ್ಷದಿಂದ ಇಲ್ಲಿನ ಗಾಂಧಿ ಮಂದಿರದಲ್ಲಿ ವಿವಿಧ ಇಲಾಖೆಗಳಿಗೆ ಪಕ್ಷಾತೀತವಾಗಿ ಕಾರ್ಯಕರ್ತರಿಗೆ ಅರ್ಜಿ ಬರೆದುಕೊಟ್ಟು, ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದ ಆನೆಗದ್ದೆ ಗ್ರಾಮದ ವಾಸಿ ‘ಕಾಂಗ್ರೆಸ್ ಜಯಪ್ಪ’ ಎಂದೇ ತಾಲೂಕಿನಾದ್ಯಂತ ಹೆಸರಾಗಿದ್ದ ಆನೆಗದ್ದೆ ಜಯಪ್ಪ ಬುಧವಾರ ತಡರಾತ್ರಿ ನಿಧನರಾದ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೃತರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೃತರು ಕಾಂಗ್ರೆಸ್ನ ಹಿರಿಯ ಕಾರ್ಯಕರ್ತನಾಗಿದ್ದು, ಕಳೆದ ಬಾರಿ ಹುಂಚ ಗ್ರಾಮ ಪಂಚಾಯತಿ ಸದಸ್ಯನಾಗಿ ಚುನಾಯಿತರಾಗಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಮೃತನ ಸೇವೆ ಅನನ್ಯವಾಗಿದ್ದು, ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ವೇಳೆ ಪಕ್ಷದ ಹಿರಿಯ ಕಾರ್ಯಕರ್ತ ಬಿ.ಆರ್. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ , ಎಂ.ಪಿ. ಸುರೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ್, ಪ್ರಮುಖರಾದ ಕೆ.ಕೆ. ಅಶ್ವಿನಿ ಕುಮಾರ್, ಎಂ.ಪಿ. ಲೋಹಿತ್, ನೇತ್ರಾವತಿ ಭಟ್, ಜಯನಗರ ಚನ್ನಬಸವ, ಚಂದ್ರಮೂರ್ತಿ, ನೋರಾ ಮೆಟೆಲ್ಡ್ ಸಿಕ್ವೇರಾ, ಉಬೇದ್ ಸಾಬ್, ಗುರು ಜಯನಗರ ಇತರರು ಉಪಸ್ಥಿತರಿದ್ದರು.

