ಹೊಸನಗರ : ಕವಿ ದ.ರಾ. ಬೇಂದ್ರೆ ಓರ್ವ ಶಬ್ದ ಗಾರುಡಿಗ. ಅವರ ಕವಿತೆಗಳು ಹಾಡುವಾಗ ಲಯಬದ್ಧವಾಗಿ ಅತ್ಯುತ್ತಮ ಗೀತೆಯಾಗಿ ಮಾರ್ಪಡುತ್ತವೆ ಎಂದು ಉಪನ್ಯಾಸಕ ರವಿ ತಿಳಿಸಿದರು.
ಪಟ್ಟಣದ ಹೋಲಿ ರಿಡೀಮರ್ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿದಾನಿ ಡಾ. ಮಾರ್ಷಲ್ ಶರಾಂ ಮತ್ತು ಚಂದ್ರಶೇಖರ ಶೇಟ್ ಅವರ ದತ್ತಿನಿಧಿ ಕಾರ್ಯಕ್ರಮದಲ್ಲಿ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಬದುಕು – ಬರಹ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ಬೇಂದ್ರೆ ಓರ್ವ ಅಪರೂಪದ ಸಾಹಿತಿ. ವಿದ್ಯಾರ್ಥಿಗಳು ಅವರ ಸಾಹಿತ್ಯ ಕೃತಿಗಳನ್ನು ಅಗತ್ಯವಾಗಿ ಓದಬೇಕೆಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ನಿವೃತ್ತ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ಬೇಂದ್ರೆ ಅವರ ಜನಪ್ರಿಯ ಕವನ ‘ನೀ ಹಾಂಗೆ ನೋಡಬೇಡ ನನ್ನ’ ಕವಿತೆಯ ಹಿಂದಿನ ದುಃಖ ದುಮ್ಮಾನ, ಕವಿತೆ ಬರೆದ ಸಂದರ್ಭ ಕುರಿತು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು. ಅಲ್ಲದೆ, ಮಕ್ಕಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿವರ್ಯರ ಕೃತಿಗಳನ್ನು ಅಗತ್ಯವಾಗಿ ನೆನಪಿಟ್ಟು ಓದಬೇಕು ಎಂಬ ಸಲಹೆ ನೀಡಿದರು.
ಕವಿ ದ.ರಾ. ಬೇಂದ್ರೆ ಅವರಿಗೆ ‘ನಾಕುತಂತಿ’, ಶಿವರಾಮ ಕಾರಂತರಿಗೆ ‘ಮೂಕಜ್ಜಿ ಕನಸುಗಳು’ ಹಾಗೂ ಮಾಸ್ತಿ ಅವರ ಚಿಕ್ಕವೀರರಾಜೇಂದ್ರ ಕೃತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನ ಆಗಿವೆ ಎಂದರು.
ಮುಖ್ಯ ಶಿಕ್ಷಕಿ ಸಿಸ್ಟರ್ ಐರಿನ್ ಡಿಸೆಲ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯದರ್ಶಿ ಅಶ್ವಿನಿ ಸ್ವಾಗತಿಸಿ, ನಾಗಪ್ರಿಯ ನಿರೂಪಿಸಿದರು. ಉಪನ್ಯಾಸಕಿ ಬಿ.ಎಸ್. ವಿನುತಾ ಕಾರ್ಯಕ್ರಮವನ್ನು ನಿರೂಪಿಸಿ, ಯುವಕವಿ ಪ್ರವೀಣ್ ಎಂ ಕಾರ್ಗಡಿ ವಂದಿಸಿದರು.
ಪ್ರಮುಖರಾದ ರಾಧಿಕಾ, ಶಂಕ್ರಪ್ಪ, ವಸಂತಿ, ಸುಜಾತ, ಮಹಾಬಲ, ವಸಿಷ್ಠ ಇತರರು ಇದ್ದರು. ನಂತರ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ಗೀತ ಗಾಯನ ಕಾರ್ಯಕ್ರಮ ನಡೆಯಿತು.

