ಹೊಸನಗರ : ವಸುದೇವ ಭೂಪಾಳಂ ಅವರಿಂದು ಭೌತಿಕವಾಗಿ ದೂರವಾಗಿದ್ದರೂ ಅವರ ನೆನಪು ಇಂದಿಗೂ ಜೀವಂತವಾಗಿ ಉಳಿದಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರು ಸುಮಾರು ಮೂರುವರೆ ಲಕ್ಷ ದತ್ತಿ ಹಣವನ್ನು ವಿಲ್ ಮೂಲಕ ನೀಡಿದ್ದೆ ಕಾರಣ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ. ಮಾರ್ಷಲ್ ಶರಾಂ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕೆ.ಎಸ್.ಕನಕರಾಜ್ ಹಾಗು ವಸುದೇವ ಭೂಪಾಳಂ ದತ್ತಿನಿಧಿ ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕಿನ ಸಂಗೀತ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆ ಕುರಿತು ಉಪನ್ಯಾಸ ನೀಡಿದರು.
ಸಾಹಿತ್ಯ ಲೋಕಕ್ಕೆ ಕೇವಲ ಕೃತಿಗಳನ್ನು ರಚಿಸುವುದು ಅಷ್ಟೇ ಅಲ್ಲದೆ, ಆರ್ಥಿಕ ನೆರವು ನೀಡಬೇಕು ಎಂಬುದು ಅವರ ಧ್ಯೇಯವಾಗಿತ್ತು. ಅವರು ನೀಡಿದ್ದ ದತ್ತಿಹಣ ಕಸಾಪ ಕೈ ಸೇರುವುದರೊಳಗೆ ₹ 11.67 ಲಕ್ಷ ಬೃಹತ್ ಮೊತ್ತವಾಗಿ ಬೆಳೆದಿತ್ತು. ಕಸಾಪ ಆ ಮೊತ್ತವನ್ನು ತನ್ನ ವಿವಿಧ ಕಾರ್ಯಚಟುವಟಿಕೆಗೆ ಬಳಸಿಕೊಂಡಿತ್ತು.
1997ರಲ್ಲಿ ವಸುದೇವ ಭೂಪಾಳಂ ದತ್ತಿ ನಿಧಿ ಸ್ಥಾಪಿಸಲಾಯ್ತು. ಅಲ್ಲದೆ, ಅವರು ತಮ್ಮ ಲಘು ಚಿಂತನೆಯ ಬಹರಗಳಿಂದ ಆರಂಭಿಸಿ, ದೇವರ ಅಸ್ತಿತ್ವವನ್ನೇ ಪ್ರಶ್ನಿಸುವವರೆಗೆ ಅವರ ಆಲೋಚನಾ ಕ್ರಮ ವಿಸ್ತಾರಗೊಂಡು, ನಂತರ ಅವರು ರಚಿಸಿದ ‘ದೇವರು ಸತ್ತ’ ಎಂಬ ಕೃತಿ ಆ ಕಾಲದಲ್ಲಿ ಬಹಳ ವಿವಾದಕ್ಕೂ ಕಾರಣವಾಗಿ ಆಸ್ತಿಕರ ಮನಸ್ಸನ್ನು ಕಲಕಿತ್ತು. ಈ ಕೃತಿಯಲ್ಲಿ ಭೂಪಾಳಂ ಅವರ ತರ್ಕ, ಆಲೋಚನಾ ಕ್ರಮವನ್ನು ಕಾಣಬಹುದು. ದೇವರ ಹೆಸರಿನಲ್ಲಿ ನಡೆಯುವ ಮೋಸ, ವಂಚನೆಗಳನ್ನು ಅವರು ನೇರ, ನಿಷ್ಠೂರ ಬರಹಗಳಿಂದ ಇಡೀ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ್ದರು.
ಸಮಾಜದಲ್ಲಿ ವೈಚಾರಿಕ ಚಿಂತನೆ ಬಿತ್ತುವ ಪ್ರಯತ್ನವನ್ನು ವಸುದೇವ ಭೂಪಾಳಂ ಮಾಡಿದ್ದಾರೆ ಎಂದು ಮಾರ್ಷಲ್ ಶರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮಕೃಷ್ಣಮೂರ್ತಿ ಮಾತನಾಡಿ, ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ತಿನ ಖಜಾಂಚಿಯಾಗಿ ತಾವು ಕೆಲವು ದಶಕಗಳ ಕಾಲ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರ ಬಗ್ಗೆ ನೆನಪಿಸಿಕೊಂಡರು.
ಉಪನ್ಯಾಸಕ ದಾಮೋದರ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು,
ತಾಲೂಕು ಕಸಾಪ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ ಪ್ರಾಸ್ತಾವಿಕ ಮಾತನಾಡಿದರು.
ಉಪನ್ಯಾಸಕ ರವಿ ಸ್ವಾಗತಿಸಿ, ಕು. ಪೂರ್ವಿ ಎಸ್ ಐತಾಳ್ ಪ್ರಾರ್ಥಿಸಿದರು. ಉಪನ್ಯಾಸಕಿ ರೂಪ ವಂದಿಸಿದರು.
ಪ್ರಮುಖರಾದ ಬಿ.ಎಸ್.ಸುರೇಶ್, ಅಶ್ವಿನಿ ಪಂಡಿತ್, ರೂಪ ಕೆ.ಎಸ್. ಗುರುದೇವ್ ಭಂಡಾರ್ಕರ್, ಕೆ.ಜಿ.ನಾಗೇಶ್ ಇತರರು ಉಪಸ್ಥಿತರಿದ್ದರು.

