ಬೆಂಗಳೂರು : ತಾತನು ಜೀವನಕಾಲದಲ್ಲಿ ಸ್ವಂತವಾಗಿ ಸಂಪಾದಿಸಿದ ಆಸ್ತಿ, ಕುಟುಂಬದಲ್ಲಿ ವಿಭಜನೆಯಾದ ನಂತರ ತಂದೆಯ ಹೆಸರಿನಲ್ಲಿ ಬಂದರೂ ಅದು ತಂದೆಯ ವೈಯಕ್ತಿಕ ಆಸ್ತಿಯಾಗಿದ್ದು, ಪಿತ್ರಾರ್ಜಿತ ಅಥವಾ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ರೀತಿಯ ಆಸ್ತಿಯಲ್ಲಿ ಮೊಮ್ಮಗಳು ಅಥವಾ ಇತರ ವಾರಸುದಾರರು ಹಕ್ಕು ಹೊಂದುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅಮೆರಿಕದಲ್ಲಿ ವಾಸಿಸುತ್ತಿರುವ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಈ ತೀರ್ಪನ್ನು ಪ್ರಕಟಿಸಿದೆ.
ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು ಉಷಾ ಸಲ್ಲಿಸಿದ ಆಸ್ತಿಗಳ ದಾಖಲೆಗಳ ಮೂಲಕ ತಾತನ ಸ್ವಂತವಾಗಿ ಸಂಪಾದಿಸಿದ ಆಸ್ತಿಯಾಗಿದ್ದು, ಆ ಆಸ್ತಿಯನ್ನು ತಾತನ ಕುಟುಂಬದ ಒಪ್ಪಂದದ ಮೂಲಕ ಮಕ್ಕಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕಂಡುಹಿಡಿದಿದೆ. ತಾತನ ಸ್ವಯಾರ್ಜಿತ ಆಸ್ತಿ ತಂದೆಗೆ ಬಂದಾಗ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ ಮತ್ತು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಿತಾಕ್ಷರ ಕಾನೂನಿನ ಅಡಿಯಲ್ಲಿ, ತಂದೆಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕಿರುತ್ತದೆ. ಮೇಲ್ಮನವಿದಾರರು ಆ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿವೆ ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ನೀಡಲಿಲ್ಲ. ಆದ್ದರಿಂದ, ಅವರು ಆ ಆಸ್ತಿಗಳ ಮೇಲೆ ಯಾವುದೇ ಕಾನೂನಾತ್ಮಕ ಹಕ್ಕು ಹೊಂದಿರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇದಲ್ಲದೆ, ಮೇಲ್ಮನವಿದಾರರು ಆಸ್ತಿಯನ್ನು ಪಿತ್ರಾರ್ಜಿತ ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಆದ್ದರಿಂದ, ಆಸ್ತಿಯ ಮೇಲೆ ಹಕ್ಕು ಪಡೆಯಲು ಅರ್ಹರಾಗಿಲ್ಲ. ತಾತನ ಸ್ವಯಂ ಸಂಪಾದಿತ ಆಸ್ತಿಯನ್ನು ಜಂಟಿ ಕುಟುಂಬದ ಆಸ್ತಿಗಳೆಂದು ವಾದಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಮೇಲ್ಮನವಿಯನ್ನು ವಜಾಗೊಳಿಸಿದೆ.
ಪಿತ್ರಾರ್ಜಿತ ಆಸ್ತಿ ಎಂದರೇನು?
ಸತತ ನಾಲ್ಕು ತಲೆಮಾರುಗಳವರೆಗೆ (ಮುತ್ತಾತ, ತಾತ, ತಂದೆ, ಮಗ/ಮಗಳು) ವಿಭಜನೆಯಾಗದೆ ವಂಶಪಾರಂಪರ್ಯವಾಗಿ ಬರುವ ಆಸ್ತಿಯನ್ನು ಸೂಚಿಸುತ್ತದೆ. ಈ ರೀತಿಯ ಆಸ್ತಿಯಲ್ಲಿ ಹಕ್ಕು ಪಡೆಯಲು ಮಕ್ಕಳು ಹುಟ್ಟಿದ್ದರೆ ಸಾಕು. ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದ ಎಲ್ಲಾ ವಾರಸುದಾರರ ಒಪ್ಪಿಗೆಯಿಲ್ಲದೆ ಮಾರಾಟ ಮಾಡಬಹುದು ಎಂಬುದು ಕಾನೂನಿನ ವಿರುದ್ಧವಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಕೆಲವು ನಿಯಮಗಳಡಿಯಲ್ಲಿ ಮಾರಾಟಕ್ಕೆ ಅವಕಾಶವಿರುತ್ತದೆ.
ಸ್ವಯಾರ್ಜಿತ ಆಸ್ತಿ ಎಂದರೇನು?
ವ್ಯಕ್ತಿಯ ಸ್ವಂತ ದುಡಿಮೆ ಅಥವಾ ಆದಾಯದಿಂದ ಖರೀದಿಸಿದ ಆಸ್ತಿ, ಇದನ್ನು ಆತನು ತನ್ನ ಇಚ್ಛೆಯಂತೆ ನೀಡಬಹುದು.
ಹೀಗಾಗಿ, ತಾತನ ಸ್ವಂತ ಸಂಪಾದನೆಯ ಆಸ್ತಿಯನ್ನು ತಂದೆಯ ಹೆಸರಿನಲ್ಲಿ ಹೊಂದಿದರೂ, ಅದು ವೈಯಕ್ತಿಕ ಆಸ್ತಿಯಾಗಿದ್ದು, ಪಿತ್ರಾರ್ಜಿತ ಆಸ್ತಿಯ ಹಕ್ಕುಗಳು ಅನ್ವಯಿಸುವುದಿಲ್ಲ ಎಂಬುದು ಈ ತೀರ್ಪಿನ ಪ್ರಮುಖ ಅಂಶವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





