ರಿಪ್ಪನ್ಪೇಟೆ ; ದಶಲಕ್ಷಣ ಪರ್ವದ 5ನೇ ದಿನದಂದು ಉತ್ತಮ ಸತ್ಯಧರ್ಮದ ಕುರಿತು ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಪ್ರವಚನ ನೀಡಿದರು.

“ಮನ-ವಾಚಾ-ಮನಸಾ ಸತ್ಯವಚನವು ಶ್ರೇಷ್ಠವಾದುದು. ಜೀವನದಲ್ಲಿ ಪ್ರತ್ಯಕ್ಷ ದರ್ಶನದ ಸತ್ಯವನ್ನು ಅರಿಯಬೇಕು. ಅಸತ್ಯ ನುಡಿಯುವುದು ಕರ್ಮಬಂಧಕ್ಕೆ ಕಾರಣವಾಗುತ್ತದೆ. ಜೈನ ಧರ್ಮದಲ್ಲಿ ಸತ್ಯಧರ್ಮ ಪರಿಪಾಲನೆಗೆ ಆದ್ಯತೆ ನೀಡಿರುವುದರಿಂದ ಸತ್ಚಾರಿತ್ರ್ಯವಂತರಾಗಿ ಯಶಸ್ಸು ಸಾಧಿಸಲು ಸಾಧ್ಯ” ಎಂದು ಶ್ರೀಗಳವರು ಧರ್ಮಸಂದೇಶ ನೀಡಿದರು.

ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಪೂಜಾ ವಿಧಿ, ಜಿನಸ್ತುತಿಯ ಬಳಿಕ ಶ್ರೀಮಹಾವೀರ ಭವನದಲ್ಲಿ ಶ್ರೀಗಳವರು ಊರ ಪರವೂರ ಭಕ್ತರಿಗೆ, ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯೆಯರಿಗೆ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಜೈನ ಧರ್ಮದ ಉಪದೇಶಗಳನ್ನು ಸಾದರಪಡಿಸಿದರು.
ಪ್ರತಿದಿನ ಸಂಜೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.

