ಶಿವಮೊಗ್ಗ : ಜಿಲ್ಲೆಯಿಂದ ಧರ್ಮಸ್ಥಳದತ್ತ ಸಾಗಲಿರುವ ಧರ್ಮ ರಕ್ಷಾ ಜಾಥಾಗೆ ಭಾರಿ ಸಿದ್ಧತೆಗಳು ನಡೆದಿದ್ದು, 150 ಕ್ಕೂ ಹೆಚ್ಚು ವಾಹನಗಳಲ್ಲಿ ಸುಮಾರು 700 ರಿಂದ 800 ಮಂದಿ ಭಕ್ತರು ಹಾಗೂ ರಾಷ್ಟ್ರಪ್ರೇಮಿಗಳು ನಾಳೆ (ಸೆ.2) ಧರ್ಮಸ್ಥಳಕ್ಕೆ ತೆರಳಲಿದ್ದಾರೆ.
ಈ ಜಾಥಾಕ್ಕೆ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವ ವಹಿಸಿಕೊಂಡಿದ್ದು, ಯುವ ನಾಯಕ ಕೆ.ಇ. ಕಾಂತೇಶ್ ಮುಂದಾಳತ್ವದಲ್ಲಿ ಜಾಥಾ ಸಾಗಲಿದೆ. ಬೆಳಗ್ಗೆ 8 ಗಂಟೆಗೆ ಈಶ್ವರಪ್ಪ ಅವರ ಮನೆಯಲ್ಲಿ ಬೆಣ್ಣೆದೋಸೆ ಉಪಾಹಾರದ ನಂತರ ಜಾಥಾ ಹೊರಡುವ ನಿರೀಕ್ಷೆ ಇದೆ.
ಜಾಥಾ ಮಾರ್ಗ: ಶಿವಮೊಗ್ಗದಿಂದ ಕಡೂರು – ಬೀರೂರು – ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆಯಲ್ಲಿ ಅಲ್ಪ ವಿರಾಮ ಪಡೆದು, ಲಘು ಉಪಹಾರ ಸೇವಿಸಿ ಮಧ್ಯಾಹ್ನ 1:30 ರ ಹೊತ್ತಿಗೆ ಧರ್ಮಸ್ಥಳ ತಲುಪಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಧರ್ಮಸ್ಥಳ ತಲುಪಿದ ನಂತರ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ತುಂಗಾ, ಗಂಗಾ ಹಾಗೂ ನೇತ್ರಾವತಿ ನದಿಯ ತೀರ್ಥ ಸೇವೆ ಮಾಡುವರು. ನಂತರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿ, “ಧರ್ಮಕ್ಕೆ ಕಳಂಕ ತರುತ್ತಿರುವವರ ವಿರುದ್ಧದ ಹೋರಾಟದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಘೋಷಿಸಲಿದ್ದಾರೆ.
ಸಂಜೆಯ ವೇಳೆಗೆ ಜಾಥಾ ವಾಪಸ್ ಆಗಲಿದ್ದು, “ಧರ್ಮ ರಕ್ಷಣೆಯ ಹೋರಾಟದಲ್ಲಿ ಜನರಿಂದ ಭಾರಿ ಬೆಂಬಲ ದೊರೆತಿದೆ” ಎಂದು ಪ್ರಮುಖ ವಿಶ್ವಾಸ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ನಾಳೆಯ ಜಾಥಾದ ಮೂಲಕ ಶಿವಮೊಗ್ಗದಿಂದ ಧರ್ಮಸ್ಥಳದತ್ತ ಅಪಾರ ವಾಹನಗಳ ದಂಡು ಹಾಗೂ ಭಕ್ತರ ಸಮೂಹ ಸಾಗುವ ಮೂಲಕ ಧರ್ಮರಕ್ಷಣೆಗಾಗಿ ಒಂದು ಬಲಿಷ್ಠ ಸಂದೇಶ ನೀಡಲಾಗುತ್ತಿದೆ.

