ರಿಪ್ಪನ್ಪೇಟೆ : ಮುಂಬರುವ ಸೆಪ್ಟೆಂಬರ್ 14ರ ಸೋಮವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಪಟ್ಟಣದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ಭಂಗಿಯ ಕಣ್ಮನ ಸೆಳೆಯುವ ಗಣಪತಿ ವಿಗ್ರಹಗಳು ಮಾರಾಟಕ್ಕೆ ಸಜ್ಜಾಗಿವೆ.

ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಹಬ್ಬದ ಕಳೆ ಈಗಿನಿಂದಲೇ ಮನೆ ಮಾಡಿದೆ. ಹಾರನಹಳ್ಳಿಯ ದಿ. ಶಿವಾನಂದಪ್ಪನವರ ಮೊಮ್ಮಗನ ಕೈಚಳಕದಲ್ಲಿ ಮೂಡಿಬಂದಿರುವ ನಾನಾ ವಿನ್ಯಾಸದ ಹಾಗೂ ಆಕರ್ಷಕ ಭಂಗಿಯ ಗಣಪತಿ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿವೆ. ತಮ್ಮ ಕಲಾತ್ಮಕ ಸ್ಪರ್ಶದ ಮೂಲಕ ಅವರು ಸಿದ್ಧಪಡಿಸಿರುವ ಈ ವಿಗ್ರಹಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಡಲು ಸಂಪೂರ್ಣವಾಗಿ ತಯಾರಾಗಿವೆ.

ಹಿಂದೂ ಮಹಾಸಭಾ ಗಣಪತಿಗೆ ಅಂತಿಮ ಸ್ಪರ್ಶ:
ಇದೇ ವೇಳೆ, ರಿಪ್ಪನ್ಪೇಟೆ ಪಟ್ಟಣದ ಪ್ರತಿಷ್ಠಿತ ‘ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ’ ವತಿಯಿಂದ ಪ್ರತಿಷ್ಠಾಪಿಸಲಾಗುವ ಗಣಪತಿ ಮೂರ್ತಿಯ ತಯಾರಿಕಾ ಕಾರ್ಯವು ಕೂಡ ಅಂತಿಮ ಘಟ್ಟ ತಲುಪಿದೆ. ಪ್ರಸ್ತುತ ಈ ಆಕರ್ಷಕ ಮೂರ್ತಿಗೆ ಬಣ್ಣದ ಲೇಪನ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಹಬ್ಬದ ಉತ್ಸಾಹ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

